ಎಥೆನಾಲ್ ಮಿಶ್ರಿತ ಪೆಟ್ರೋಲ್‌ ಕಾರ್ಯನೀತಿ: ಎಷ್ಟು ಸೂಕ್ತ?

ದೇಶದೆಲ್ಲೆಡೆ ಶೇ.20ರಷ್ಟು ಎಥೆನಾಲ್‌ ಮಿಶ್ರಿತ ಪೆಟ್ರೋಲ್‌(ಇ20) ಮಾತ್ರ ಪೂರೈಕೆಯಾಗುತ್ತಿದೆ. ದೇಶ ಶೇ.85ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು ವಿದೇಶಿ ಅವಲಂಬನೆ ಯನ್ನು ಕಡಿಮೆಗೊಳಿಸಲು ಮತ್ತು ವಿದೇಶಿ  ವಿನಿಮಯ ಉಳಿಸಲು ಇಂಥ ಕ್ರಮ ಅಗತ್ಯವಾಗಿತ್ತು ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಇ20 ಪ್ರಯೋಜನಗಳು ಪ್ರಶ್ನಾರ್ಹ ವಾಗಿವೆ.

ದೇಶ ವಿಶ್ವದ ಮೂರನೇ ಅತಿ ದೊಡ್ಡ ಕಾರು ಮಾರುಕಟ್ಟೆ. ದುಬಾರಿ ಕಚ್ಚಾ ತೈಲ ಆಮದು ಕಡಿಮೆಗೊಳಿಸಲು ಮತ್ತು ಪರಿಸರಸ್ನೇಹಿ ಶುದ್ಧ ಇಂಧನ ಪೂರೈಸುವ ಉದ್ಧೇಶದಿಂದ ಇಬಿಪಿ(ಎಥೆನಾಲ್‌ ಬ್ಲೆಂಡಿಂಗ್‌ ಪಾಲಿಸಿ)ಯನ್ನು 2001ರಲ್ಲಿ ಮಹಾರಾಷ್ಟ್ರ/ಉತ್ತರಪ್ರದೇಶದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಯಿತು. 2003ರಲ್ಲಿ 9 ರಾಜ್ಯಗಳು ಹಾಗೂ 4 ಕೇಂದ್ರಾಡಳಿತ ಪ್ರದೇಶದಲ್ಲಿ ಇ5 ಪೂರೈಕೆ ಶುರುವಾಯಿತು. 2018 ರಲ್ಲಿ ರಾಷ್ಟ್ರೀಯ ಜೈವಿಕ ಇಂಧನ ನೀತಿ ರೂಪಿಸಿ, 2019ರಿಂದ ಇ10 ಪೆಟ್ರೋಲ್‌ ಮಾರಾಟ ಶುರುವಾಯಿತು. 2022 ರಲ್ಲಿ ಜೈವಿಕ ನೀತಿಗೆ ತಿದ್ದುಪಡಿ ತಂದು, ಏಪ್ರಿಲ್‌ 1,2023ರಿಂದ ಎಥೆನಾಲ್‌ ಪ್ರಮಾಣವನ್ನು ಶೇ.14.06ಕ್ಕೆ ಹೆಚ್ಚಿಸಲಾಯಿತು.ಜುಲೈ 2025ರಿಂದ ಇ20 ಪೆಟ್ರೋಲ್‌ ಮಾತ್ರ ಲಭ್ಯವಾಗತೊಡಗಿದೆ. ತೈಲ ಮಾರುಕಟ್ಟೆ ಕಂಪನಿ(ಒಎಂಸಿ)ಗಳು ಎಥೆನಾಲ್‌ ಪೂರೈಕೆ ಸರಪಳಿ ಸ್ಥಾಪಿಸಿರುವುದು ಇದಕ್ಕೆ ಕಾರಣ. ಕಾರ್ಯನೀತಿಯನ್ನು ಉದ್ಯಮ ಸ್ವಾಗತಿಸಿದೆ; ವಾಹನ ಮಾಲೀಕರು-ಸಾರ್ವಜನಿಕರು ವಿರೋಧಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ ಇ27ರ ರಾಗ ಆರಂಭಿಸಿದೆ.

ಇ20 ಬಳಕೆಯಿಂದ ದೇಶಕ್ಕೆ ಇಂಧನ ಸ್ವಾತಂತ್ರ್ಯ ವಲ್ಲದೆ, ಕಡಿಮೆ ಹಸಿರುಮನೆ ಅನಿಲ ಹೊರಸೂಸುವುದರಿಂದ ವಾಯುಮಾಲಿನ್ಯ ಮತ್ತು ಇಂಗಾಲದ ಹೆಜ್ಜೆಗುರುತು ಕಡಿಮೆಯಾಗುತ್ತದೆ.  ಎಥೆನಾಲ್ ಉತ್ಪಾದನೆಗೆ ಬಳಸುವ ಕಬ್ಬು ಮತ್ತು ಮೆಕ್ಕೆಜೋಳ ಬೆಳೆಯುವ ರೈತರಿಗೆ ಲಾಭ ವಾಗುತ್ತದೆ; ಎಥೆನಾಲ್ ಉತ್ಪಾದಿಸುವ ಕೈಗಾರಿಕೆಗಳು ಉದ್ಯೋಗವನ್ನು ಸೃಷ್ಟಿಸುತ್ತವೆ. ಇದ ರಷ್ಟೇ ಮುಖ್ಯವಾಗಿ, ಇ20 ಇಂಧನವನ್ನು ಅಸ್ತಿತ್ವದಲ್ಲಿರುವ ವಿತರಣೆ ಕಾರ್ಯಜಾಲದ ಮೂಲಕ ಪೂರೈಸಬಹುದು. ಇವೆಲ್ಲವೂ ಸಕಾರಾತ್ಮಕ ಅಂಶಗಳು. 2020-21ರ ನೀತಿ ಆಯೋಗದ ವರದಿಯು ಪೆಟ್ರೋಲ್‌ಗಿಂತ ಎಥೆನಾಲ್ ಅಗ್ಗವಾಗಿರುವುದರಿಂದ, ಇ20 ಬೆಲೆ ಕಡಿಮೆ ಇರಲಿದೆ ಎಂದು ಹೇಳಿತ್ತು. ಆದರೆ, ಈಗ ಎಥೆನಾಲ್‌ ದುಬಾರಿಯಾಗಿದ್ದು, ಇ20 ಬೆಲೆ ಹೆಚ್ಚಿದೆ.  ಭಾರತೀಯ ತೈಲ ಸಚಿವಾಲಯ ಮತ್ತು ಸರ್ಕಾರಿ ವರದಿ ಪ್ರಕಾರ, ಗ್ರಾಹಕರಿಗೆ ಉಳಿತಾಯ ಮತ್ತು ಇಂಧನ ಭದ್ರತೆ ಎಥೆನಾಲ್ ಮಿಶ್ರಣ ಕಾರ್ಯಕ್ರಮದ ಉದ್ದೇಶ. ಆದರೆ, ಬೆಲೆ ಹೆಚ್ಚಳದಿಂದ ಗ್ರಾಹಕರಿಗೆ ಹಣ ಉಳಿತಾಯ ಆಗುತ್ತಿಲ್ಲ.

ʻಆಹಾರ ವಿ/ಎಸ್‌ ಇಂಧನʼ ಚರ್ಚೆ: ಮೂಲಭೂತ ಸಮಸ್ಯೆಯೆಂದರೆ,  ಇ20 ಕೃಷಿ, ಪರಿಸರ ಮತ್ತು ಆಹಾರ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ;ಇದರಿಂದ ʻಆಹಾರ ವಿ/ಎಸ್‌ ಇಂಧನʼ ಚರ್ಚೆ ಮುನ್ನೆಲೆಗೆ ಬಂದಿದೆ. ಜೈವಿಕ ಎಥೆನಾಲ್ ಅನ್ನು ಸಸ್ಯ ಆಧರಿತ ಸಂಪನ್ಮೂಲಗಳಿಂದ ಹುದುಗುವಿಕೆ ಮತ್ತು ಬಟ್ಟಿ ಇಳಿಸುವಿಕೆಯಿಂದ ತಯಾರಿಸಲಾಗುತ್ತದೆ. ಇದಕ್ಕೆ ಕಬ್ಬು,ಮೆಕ್ಕೆಜೋಳ ಮತ್ತು ಭತ್ತ ಬಳಕೆಯಾಗುತ್ತಿದೆ.ಕೃಷಿ ಅವಶೇಷ(ಹುಲ್ಲು, ಕಬ್ಬಿನ ಕೂಳೆ, ಜೋಳದ ರವದಿ  ಇತ್ಯಾದಿ)ದಂಥ ಸೆಲ್ಯುಲೋಸ್‌ ಇರುವ ವಸ್ತುಗಳಿಂದ ತಯಾರಿ ಸುವ ಎರಡನೇ ತಲೆಮಾರಿನ ಜೈವಿಕ ಎಥೆನಾಲ್ ಉತ್ಪಾದನೆ ದೇಶದಲ್ಲಿ ಆರಂಭಿಕ ಹಂತದಲ್ಲಿದೆ.

ಮೊದಲಿನ ಕೆಲವು  ವರ್ಷ ಇ10 ಮಿಶ್ರಣಕ್ಕೆ ಎಥೆನಾಲ್ ಅನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.ಆರಂಭದಲ್ಲಿ ಎಥೆನಾಲ್‌ಗೆ ಮುಖ್ಯ ಕಚ್ಚಾವಸ್ತುವಾಗಿ ಕಬ್ಬು ಬಳಕೆಯಾಗುತ್ತಿತ್ತು. ಸಕ್ಕರೆಯ ಉಪ ಉತ್ಪನ್ನ ಮೊಲಾಸಸ್‌ನಿಂದ ಎಥೆನಾಲ್‌ ತಯಾರಿಸುತ್ತಿದ್ದುದರಿಂದ,ಸಕ್ಕರೆಯ ಲಭ್ಯತೆ ಕುಸಿತ, ಬೆಲೆ ಹೆಚ್ಚಳ  ಮತ್ತು ಇತರ ಮದ್ಯಸಾರ ಬಳಕೆದಾರ ಕೈಗಾರಿಕೆಗಳ ಮೇಲೆ ಒತ್ತಡ ಉಂಟಾಯಿತು.  ಆನಂತರ ಸರ್ಕಾರ ಕಬ್ಬಿನ ರಸವನ್ನು ನೇರವಾಗಿ ಎಥೆನಾಲ್ ಆಗಿ ಪರಿವರ್ತಿಸುವ ಅವಿವೇಕದ ನಿರ್ಧಾರ ತೆಗೆದುಕೊಂಡಿತು. ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಇತ್ತೀಚೆಗೆ ಈ ನೀತಿಯನ್ನು ಹಿಂಪಡೆಯಲಾಗಿದೆ.

ರಾಷ್ಟ್ರೀಯ ಜೈವಿಕ ಇಂಧನ ನೀತಿಯು ಕಬ್ಬಿನ ರಸ, ಮೊಲಾಸಸ್, ಸಕ್ಕರೆ ಹೊಂದಿರುವ ವಸ್ತು(ಸಿಹಿ ಗೆಣಸು ಇತ್ಯಾದಿ)ಗಳಿಂದ ಮತ್ತು ಪಿಷ್ಟ ಹೊಂದಿರುವ ವಸ್ತು(ಜೋಳ, ಮರಗೆಣಸು, ಗೋಧಿ, ನುಚ್ಚು, ಕೊಳೆತ ಆಲೂಗಡ್ಡೆ ಇತ್ಯಾದಿ ಆಹಾರ ವಸ್ತು)ಗಳಿಂದ ಎಥೆನಾಲ್ ಉತ್ಪಾದಿಸಲು ಉತ್ತೇಜನ ನೀಡಿತು. ಇ10 ಮಿಶ್ರಣಕ್ಕಾಗಿ 450 ಕೋಟಿ (4.5 ಬಿಲಿಯನ್) ಲೀಟರ್ ಎಥೆನಾಲ್  ಉತ್ಪಾದಿಸಲಾಗುತ್ತಿತ್ತು; ಇ20 ಮಿಶ್ರಣಕ್ಕೆ ಅಂದಾಜು 1,000 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸಬೇಕಾಗುತ್ತದೆ. ದೇಶ ವಿಶ್ವದಲ್ಲೇ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶಗಳಲ್ಲಿ ಒಂದು; ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕ ಪ್ರಮುಖ ಸಕ್ಕರೆ ಉತ್ಪಾದಿಸುವ ರಾಜ್ಯಗಳು. ದೇಶದಲ್ಲಿ 700 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, 340 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿ, ವಾರ್ಷಿಕ 80,000 ಕೋಟಿ ರೂ. ವಹಿವಾಟು ನಡೆಸುತ್ತಿವೆ. ಸಕ್ಕರೆ ಉದ್ಯಮವು ಅಂದಾಜು ಐದು ಕೋಟಿ ಜನರಿಗೆ ಉದ್ಯೋಗ ನೀಡಿದೆ. ಎಥೆನಾಲ್‌ಗೆ ಬೇಡಿಕೆ ಹೆಚ್ಚಳದಿಂದ ನೀರಿನ ಕೊರತೆಯಿರುವ ಪ್ರದೇಶಗಳಲ್ಲೂ ಕಬ್ಬು ಕೃಷಿ ಹೆಚ್ಚಿತು.ಕಬ್ಬು ಬಹು ಉತ್ಪನ್ನಗಳ ಬೆಳೆ; ರಸದಿಂದ ಸಕ್ಕರೆ, ಮೊಲಾಸಸ್ ನಿಂದ ಎಥೆನಾಲ್‌, ಫಿಲ್ಟರ್ ಕೇಕ್ ನಿಂದ ಗೊಬ್ಬರ ಮತ್ತು ಬಗಾಸ್ ನ್ನು ವಿದ್ಯುತ್ ಉತ್ಪಾದನೆ(ಕೋಜನರೇಷನ್)ಗೆ ಬಳಸಲಾಗುತ್ತದೆ. ಮೊಲಾಸಸ್ ನಲ್ಲಿ ಎರಡು ವಿಧ- ಮೊಲಾಸಸ್-ಸಿ. ಸಕ್ಕರೆ ಸಂಸ್ಕರಣೆಯ ಅಂತಿಮ ಉಪ ಉತ್ಪನ್ನ. ಇದರಲ್ಲಿ ಸಕ್ಕರೆ ಅಂಶ ಇರುವುದಿಲ್ಲ ಮತ್ತು ಮೊಲಾಸಸ್-ಬಿ ಮಧ್ಯಂತರ ಉಪಉತ್ಪನ್ನ; ಇದರಲ್ಲಿ ಅಲ್ಪ ಪ್ರಮಾಣದ ಸಕ್ಕರೆ ಇರುತ್ತದೆ. ಕಬ್ಬು ಅಧಿಕ ನೀರು ಅಗತ್ಯವಿರುವ ಬೆಳೆ;  ಕಬ್ಬಿನ ಬೆಳವಣಿಗೆ ಚಕ್ರದ ಅವಧಿ ಅಂದಾಜು 12-15 ತಿಂಗಳು ಮತ್ತು ಎಕರೆಗೆ ಅಂದಾಜು 60 ರಿಂದ 80 ಟನ್‌ ಇಳುವರಿ ಬರುತ್ತದೆ. ನೀತಿ ಆಯೋಗದ ಮಾರ್ಚ್ 2020 ರ ವರದಿ ಪ್ರಕಾರ, ಒಂದು ಕೆಜಿ ಸಕ್ಕರೆ ಉತ್ಪಾದನೆಗೆ 1,500- 2,000 ಕೆಜಿ ನೀರು ಬೇಕಾಗುತ್ತದೆ ಮತ್ತು ಒಂದು ಟನ್ ಕಬ್ಬು ಬೆಳೆಗೆ 3 ಲಕ್ಷ ಲೀಟರ್ ನೀರು ಅಗತ್ಯವಿದೆ. ಮೊಲಾಸಸ್‌ನಿಂದ ಸಕ್ಕರೆ,ಮದ್ಯಸಾರ ಮತ್ತು ಇನ್ನಿತರ ಉತ್ಪನ್ನಗಳ ಉತ್ಪಾದನೆಯಿಂದ ತೀವ್ರ ಮಾಲಿನ್ಯ  ಉಂಟಾಗುತ್ತದೆ;  ಸಕ್ಕರೆ ಕಾರ್ಖಾನೆಗಳು ದೇಶದ ಅತ್ಯಂತ ಮಲಿನಕರ ಕೈಗಾರಿಕೆಗಳಲ್ಲಿ ಮೂರನೇ ಸ್ಥಾನದಲ್ಲಿವೆ.ನೀತಿ ಆಯೋಗದ ವರದಿ ಪ್ರಕಾರ, ಕಬ್ಬಿನಿಂದ ಉತ್ಪತ್ತಿಯಾಗುವ ಒಂದು ಲೀಟರ್ ಎಥೆನಾಲ್ ಕನಿಷ್ಠ 2,860 ಲೀಟರ್ ನೀರು ಬಳಸುತ್ತದೆ.  ಜುಲೈ 2020 ರ ʻಭಾರತದಲ್ಲಿ ನೀರು-ಆಹಾರ-ಇಂಧನ ಸವಾಲು ಗಳು: ಸಕ್ಕರೆ ಉದ್ಯಮದ ರಾಜಕೀಯ ಆರ್ಥಿಕತೆʼ  ಸಂಶೋಧನಾ ಪ್ರಬಂಧದ  ಪ್ರಕಾರ, ಇ20 ಕಾರ್ಯನೀತಿಯು ಕಾಕಂಬಿಯನ್ನು ಅವಲಂಬಿಸಿದ್ದರೆ, 1320 ದಶಲಕ್ಷ ಟನ್ ಕಬ್ಬು, 19 ದಶಲಕ್ಷ ಹೆಕ್ಟೇರ್ ಹೆಚ್ಚುವರಿ ಭೂಮಿ ಮತ್ತು 348 ಶತಕೋಟಿ ಘನ ಮೀಟರ್ ಹೆಚ್ಚುವರಿ ನೀರು ಅಗತ್ಯವಿದೆ. ಕಬ್ಬು ಕೃಷಿ ಹೆಚ್ಚಿದಂತೆ, 161 ದಶಲಕ್ಷ ಟನ್ ಹೆಚ್ಚುವರಿ ಸಕ್ಕರೆ ಉತ್ಪಾದನೆ ಯಾಗುತ್ತದೆ ಎಂದು ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ವಿವರಿಸುತ್ತಾರೆ. ಆದ್ದರಿಂದ, ಎಥೆನಾಲ್‌ ಉತ್ಪಾದನೆಗೆ ಕಬ್ಬು ಬೆಳೆಸುವಿಕೆ ಪರಿಸರಸ್ನೇಹಿಯಲ್ಲ.

ಮೆಕ್ಕೆ ಜೋಳದ್ದು ಇನ್ನೊಂದು ಕಥೆ:  2021-22ರಲ್ಲಿ ಮೆಕ್ಕೆಜೋಳವನ್ನು ಎಥೆನಾಲ್‌ ಉತ್ಪಾದನೆಗೆ ಬಳಸಿರಲಿಲ್ಲ. 2022-23ರ ಎಥೆನಾಲ್ ಸರಬರಾಜು ವರ್ಷ(ಇಎಸ್‌ ವೈ)ದಿಂದ ಭಾರತೀಯ ಆಹಾರ ನಿಗಮ(ಫುಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ)ದ ಗೋದಾಮುಗಳಲ್ಲಿ ಇದ್ದ ಮುಗ್ಗಲು ಅಕ್ಕಿ, ಇತರ ಕೆಲವು ಕಿರು ಧಾನ್ಯಗಳಲ್ಲದೆ, ಮೆಕ್ಕೆಜೋಳದ ಬಳಕೆ ಆರಂಭವಾಯಿತು. ಮೆಕ್ಕೆಜೋಳದಿಂದ ಉತ್ಪಾದಿಸಿದ ಎಥೆನಾಲ್ ಪ್ರಮಾಣ 2022-23ರಲ್ಲಿ 315 ದಶಲಕ್ಷ  ಲೀಟರ್‌ಗಳಿಂದ 2023-24ರಲ್ಲಿ 2,860 ದಶಲಕ್ಷ ಲೀಟರ್‌ಗೆ ಹೆಚ್ಚಿತು.ಇದು ಒಟ್ಟು ಉತ್ಪಾದನೆಯಾದ ಎಥೆನಾಲ್ ನಲ್ಲಿ ಶೇ.42 ಪಾಲು: 2024-25ರಲ್ಲಿ ಇದು ಶೇ.51 ದಾಟಿತು.

ಇದರಿಂದ  ಎರಡು ಪ್ರಮುಖ ವಿಪರಿಣಾಮಗಳು ಉಂಟಾದವು; ಮೆಕ್ಕೆಜೋಳ ಬೆಳೆ ಪ್ರದೇಶ ಸುಮಾರು ಶೇ.10ರಷ್ಟು ಹೆಚ್ಚಳಗೊಂಡಿತು. ಪ್ರತಿಯಾಗಿ, ಎಣ್ಣೆಬೀಜಗಳು,ರಾಗಿ ಮತ್ತು ಇತರ ದ್ವಿದಳ ಧಾನ್ಯಗಳ ಕೃಷಿ ಪ್ರದೇಶ ಕುಸಿಯಿತು. ಮೆಕ್ಕೆಜೋಳದ ಕೊರತೆಯು ಕೋಳಿ ಸಾಕಣೆದಾರರು, ಸಣ್ಣ ರೈತರು ಮತ್ತು ಕೋಳಿ ಆಹಾರ ಉದ್ಯಮದ ಮೇಲೆ ವಿಪರಿಣಾಮ ಬೀರಿತು. ಇವರು ಬೆಳೆದ ಮೆಕ್ಕೆಜೋಳದಲ್ಲಿ ಶೇ.70ನ್ನು ಬಳಸುತ್ತಿದ್ದರು; ಈಗ ಶೇ. 15 ಅಥವಾ ಅದಕ್ಕಿಂತ ಹೆಚ್ಚು ಕೊರತೆಯುಂಟಾಗಿದೆ. ಬಾಂಗ್ಲಾದೇಶ, ವಿಯಟ್ನಾಂ, ಮಲೇಷ್ಯಾ ಮತ್ತಿತರ ದೇಶಗಳಿಗೆ ಮೆಕ್ಕೆ ಜೋಳವನ್ನು ರಫ್ತು ಮಾಡುತ್ತಿದ್ದ ದೇಶ, ಈಗ ಆಮದು ಮಾಡಿಕೊಳ್ಳುವಂತಾಗಿದೆ. ಇದು ಎಥೆನಾಲ್ ಕಾರ್ಯನೀತಿಯ ಇನ್ನೊಂದು ಮುಖ.

ಎಥೆನಾಲ್‌ ಉತ್ಪಾದನೆ ಅಕ್ಕಿ, ರಾಗಿ ಮತ್ತಿತರ ಆಹಾರಧಾನ್ಯ ಸರಬರಾಜಿಗೆ ಬೆದರಿಕೆಯೊಡ್ಡಿದೆ. ಪ್ರತಿ ಟನ್‌ ಅಕ್ಕಿಯಿಂದ  450-480 ಲೀಟರ್ ಮತ್ತು ಇತರ ಧಾನ್ಯಗಳಿಂದ 380-460 ಲೀಟರ್ ಎಥೆನಾಲ್‌ ಉತ್ಪಾದನೆಯಾಗುತ್ತದೆ; ಮೊಲಾಸಸ್‌ನಿಂದ ಸುಮಾರು 225 ಲೀಟರ್.  ಎಫ್‌ಸಿಐ ಗೋದಾಮುಗಳಲ್ಲಿ  ಕೊಳೆಯುತ್ತಿರುವ ಅಕ್ಕಿಯನ್ನು ಬಳಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ; ಆದರೆ, ಗುಣಮಟ್ಟದ ಅಕ್ಕಿ ಬಳಸುತ್ತಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ದೂರುಗಳೇನು?: ಸರ್ಕಾರದ ಎಥೆನಾಲ್‌ ಮಿಶ್ರಣ ಕಾರ್ಯನೀತಿ(ಇಬಿಪಿ)ಯ ಸಮಸ್ಯೆಯೆಂದರೆ,ಅದು ವಾಹನ ಮತ್ತು ಎಥೆನಾಲ್ ಉತ್ಪಾದನೆ ಉದ್ಯಮದ ಹಿತಾಸಕ್ತಿಗಳನ್ನು ಮಾತ್ರ ಪರಿಗಣಿಸಿದೆ; ವಾಹನ ಬಳಕೆದಾರರನ್ನು ನಿರ್ಲಕ್ಷಿಸಿದೆ. ಇ20ಗೆ ಪರಿವರ್ತನೆ ಕುರಿತು ಸೂಕ್ತ ಮಾಹಿತಿ ನೀಡಿಲ್ಲ; ಯಾವುದೇ ಪ್ರೋತ್ಸಾಹಕಗಳನ್ನು ನೀಡಿಲ್ಲ.ಇಂಧನ ಕಾರ್ಯಕ್ಷಮತೆ ಮತ್ತು ಮೈಲೇಜ್‌ನಲ್ಲಿ ಗಣನೀಯ ಕುಸಿತ,ಇಂಧನ ವೆಚ್ಚ ಹೆಚ್ಚಳ ಮತ್ತು ವಿಶೇಷವಾಗಿ ಹಳೆಯ ವಾಹನಗಳಲ್ಲಿ ಎಂಜಿನ್‌ ಮತ್ತು ಇತರ ಭಾಗಗಳ ಸವಕಳಿ ಹೆಚ್ಚಳದಿಂದ  ನಿರ್ವಹಣೆ ವೆಚ್ಚ ಹೆಚ್ಚಿದೆ ಎಂದು ಮಾಲೀಕರು ದೂರುತ್ತಿದ್ದಾರೆ.ಆದರೆ,ಸರ್ಕಾರ ಈ ಆರೋಪ ತಳ್ಳಿಹಾಕಿದೆ. ವಾಹನದ ವಯಸ್ಸು,ಇ20ಗೆ ಹೊಂದಾಣಿಕೆ ಮತ್ತು ಎಂಜಿನ್ ಟ್ಯೂನಿಂಗ್  ಆಧರಿಸಿ, ಇಂಧನ ಕ್ಷಮತೆ  ಶೇ.1-6ರಷ್ಟು ಕಡಿಮೆ ಆಗಬಹುದು ಎಂದಿದೆ.ಆದರೆ,ವಾಹನ ಬಳಕೆದಾರರು ಮೈಲೇಜ್‌ನಲ್ಲಿ ಶೇ.20ರಷ್ಟು ಇಳಿಕೆ ಆಗುತ್ತಿದೆ ಎಂದು ದೂರುತ್ತಿದ್ದಾರೆ.

ಪೆಟ್ರೋಲ್‌ನ ಕ್ಯಾಲೊರಿಫಿಕ್ ಮೌಲ್ಯ (ಸಿವಿ ಅಥವಾ ಕ್ಯಾಲರಿ ಮೌಲ್ಯ) ಎಥೆನಾಲ್‌ಗಿಂತ ಅಧಿಕ. ಪೆಟ್ರೋಲ್‌ನ ಸಿವಿ 46.4 ಮೆಗಾ ಜೌಲ್‌/ಕೆಜಿ; ಎಥೆನಾಲ್‌ನ ಸಿವಿ 29.7 ಮೆಗಾ ಜೌಲ್/ಕೆಜಿ;‌ ಅಂದರೆ, ಶೇ.36 ಕಡಿಮೆ. ಸರಳವಾಗಿ ಹೇಳಬೇಕೆಂದರೆ, 10 ಲೀಟರ್ ಶುದ್ಧ ಪೆಟ್ರೋಲ್‌ ನಿಂದ ಪಡೆಯುವ ಶಕ್ತಿಗೆ ಶೇ.8ರಷ್ಟು ಹೆಚ್ಚು ಇ20 ಇಂಧನ ಬೇಕಾಗುತ್ತದೆ. ಇದು ಪ್ರಯೋಗಾಲಯದ ಲೆಕ್ಕಾಚಾರ. ದೇಶದ ರಸ್ತೆಗಳ ಹೀನಾಯಕರ ಸ್ಥಿತಿ ಮತ್ತು ವಾಹನ ದಟ್ಟಣೆಯಿಂದಾಗಿ, ಇಂಧನ ನಷ್ಟ ಇನ್ನಷ್ಟು ಹೆಚ್ಚಲಿದೆ. ಅಂದಾಜು, ಶೇ.10ರಷ್ಟು ಇಂಧನ ನಷ್ಟ ಆಗಲಿದೆ. ಈ ನಷ್ಟ ವನ್ನು ಇ20ಗೆ ಕಡಿಮೆ ಬೆಲೆ ವಿಧಿಸುವ ಮೂಲಕ ʻಸರಿದೂಗಿಸಬೇಕುʼ ಎಂದು ಕೆಲವರು ಹೇಳುತ್ತಾರೆ.ದಿಲ್ಲಿಯಲ್ಲಿ ಇ20 ಇಂಧನದ ಮಾರಾಟ ದರ ಲೀಟರಿಗೆ 91ರೂ.(ಪೆಟ್ರೋಲ್‌ ದರಕ್ಕೆ ಸಮ).ಪರಿಸರ ಮಾಲಿನ್ಯ ತಡೆಗೆ ಇ20ಯನ್ನು ಪ್ರೋತ್ಸಾಹಿಸುತ್ತಿದ್ದೇವೆ ಎನ್ನುವುದಾದರೆ, ಇ20 ಬೆಲೆ ಕಡಿಮೆ ಇಡಬಾರದೇಕೆ?ಜೋಳದಿಂದ ಉತ್ಪಾದಿಸುವ ಎಥೆನಾಲ್‌ ಬೆಲೆ ಹೆಚ್ಚಳ ವಾಗಿದೆ(ಲೀಟರಿಗೆ 71.86 ರೂ.). ಹೀಗಾಗಿ ಇ20 ಬೆಲೆ ಕಡಿಮೆ ಮಾಡಲಾಗದು ಎಂದು ಸರ್ಕಾರ ಸಮಜಾಯಿಷಿ ನೀಡುತ್ತದೆ.

ವಾಹನ ಬಳಕೆದಾರರ ಮತ್ತೊಂದು ದೂರು- ನಿರ್ವಹಣೆ ವೆಚ್ಚ ಹೆಚ್ಚಳ ಹಾಗೂ ಹಳೆಯ ವಾಹನಗಳನ್ನು ಇ20 ಗೆ ಅಳವಡಿಸುವಿಕೆ ವೆಚ್ಚ. ಮದ್ಯಸಾರ ನೀರನ್ನು ಆಕರ್ಷಿಸುತ್ತದೆ. ಇದರಿಂದ ಇಂಧನ ಫಿಲ್ಟರ್, ಪಂಪ್ ಮುಂತಾದ ಘಟಕಗಳಲ್ಲಿ ತುಕ್ಕು ಹಿಡಿಯುವಿಕೆ ಹೆಚ್ಚಲಿದೆ. ಇವನ್ನು ಮತ್ತು ರಬ್ಬರ್ ಟ್ಯೂಬ್‌, ಗ್ಯಾಸ್ಕೆಟ್‌, ಸೀಲುಗಳು ಸೇರಿದಂತೆ ಕೆಲವು ಪ್ಲಾಸ್ಟಿಕ್‌ ಭಾಗಗಳನ್ನು ಹಾಗೂ ಇಂಧನ ಫಿಲ್ಟರ್‌/ ಎಂಜಿನ್ ತೈಲವನ್ನು ಬದಲಿಸಬೇಕಾಗುತ್ತದೆ. ಇದಕ್ಕೆ ಹೆಚ್ಚುವರಿ ವೆಚ್ಚ ತಗಲುತ್ತದೆ. ಸರ್ಕಾ ರದ ನಿಯಮಗಳ ಪ್ರಕಾರ, 2023 ರ ನಂತರ ಮಾರಾಟ ವಾದ ಎಲ್ಲ ವಾಹನಗಳು ಇ20 ಇಂಧನಕ್ಕೆ ಅನುಗುಣವಾಗಿರಬೇಕು. ಆದರೆ, ರಸ್ತೆಯಲ್ಲಿರುವ ಸುಮಾರು ಶೇ.90 ರಷ್ಟು ವಾಹನಗಳು ಹಳೆಯವು.

ದುರದೃಷ್ಟವಶಾತ್, ಗ್ರಾಹಕರಿಗೆ ಬೇರೆ ಆಯ್ಕೆಯಿಲ್ಲ;  ಇ20 ಮತ್ತು ಪೆಟ್ರೋಲ್ ಎರಡರ ಬೆಲೆ ಒಂದೇ ಇದೆ;  ಇದಕ್ಕಿಂತ ಮುಖ್ಯ ವಿಷಯವೆಂದರೆ, ಎಲ್ಲ ಕಡೆ ಇ20 ಪೂರೈಕೆ ಆರಂಭವಾದ ಬಳಿಕ ಪೆಟ್ರೋಲ್ ಎಲ್ಲಿಯೂ ಲಭ್ಯವಿರುವುದಿಲ್ಲ! ಬಿಜೆಪಿ ಸರ್ಕಾರ ಅಂತಾರಾಷ್ಟ್ರೀಯ ತೈಲ ಬೆಲೆಗಳ ಏರಿಕೆಯ ಸಂಪೂರ್ಣ ಲಾಭ ಪಡೆದುಕೊಂಡಿದೆ; ಆದರೆ, ಬೆಲೆ ಕುಸಿದಾಗ, ಅದನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ.ಬಳಕೆದಾರರು ಇ20ಕ್ಕೆ ಹೆಚ್ಚು ಹಣ ತೆರುವುದು ತಪ್ಪುವುದಿಲ್ಲ. ಪೆಟ್ರೋಲ್‌ಗಿಂತ ಎಥೆನಾಲ್‌ ಕಡಿಮೆ ಇಂಗಾಲದ ಡೈಆಕ್ಸೈಡ್‌ ಹೊರಸೂಸುತ್ತದೆ, ನಿಜ;  ಆದರೆ, ಪಿಎಂ2.5 ಮತ್ತು ಇಂಗಾಲದ ಮಾನಾಕ್ಸೈಡ್‌ ಪ್ರಮಾಣ ಕಡಿಮೆಯಾಗುವುದಿಲ್ಲ.

ಸಮಸ್ಯೆ ಸ್ಪಷ್ಟವಾಗಿದೆ;  ಆದರೆ, ಕಂಡುಕೊಂಡ ಪರಿಹಾರ ಉದ್ಯಮಪತಿಗಳಿಗೆ ನೆರವಾಗುವಂತೆ ಇದೆ. ಸಕ್ಕರೆ ಕಾರ್ಖಾನೆಗಳು ಬಲಿಷ್ಠ ರಾಜಕಾರಣಿಗಳ ಹಿಡಿತದಲ್ಲಿವೆ. ಸಕ್ಕರೆ ಮಾರಾಟ ಆದಾಯವಲ್ಲದೆ, ಎಥೆನಾಲ್‌ ಉತ್ಪಾದನೆ, ವಿದ್ಯುತ್‌ ಸಹ ಉತ್ಪಾದನೆ ಹಾಗೂ ಗೊಬ್ಬರ ಮಾರಾಟದಿಂದಲೂ ಇವರು ಹಣ ಮಾಡುತ್ತಿದ್ದು, ದುಂಡಗಾಗಿದ್ದಾರೆ. ಆದರೆ, ಕಬ್ಬು ಬೆಳೆಗಾರರಿಗೆ  ಹಣ ಪಾವತಿ ಮಾಡದೆ, ಸತಾಯಿಸುತ್ತಾರೆ. ಉದ್ಯಮಿಗಳ ಕೃಪೆಯಲ್ಲಿರುವ ಸರ್ಕಾರಗಳು ಅವರಿಗೆ ಲಾಭವಾಗುವಂಥ ನೀತಿ-ಯೋಜನೆಗಳನ್ನು ಎಗ್ಗಿಲ್ಲದೆ ಮುಂದೊತ್ತುತ್ತಿವೆ. ಸರ್ಕಾರದ ಪ್ರಕಾರ, ಇಥೆನಾಲ್‌ ಕಾರ್ಯನೀತಿಯಿಂದ 2014-15ರಿಂದ ಜುಲೈ 2025ರವರೆಗೆ 1.44 ಲಕ್ಷ ಕೋಟಿ ರೂ. ವಿದೇಶಿ ವಿನಿಮಯ ಹಾಗೂ ರೈತರಿಗೆ ಕಬ್ಬು/ಜೋಳ ಮತ್ತು ಇತರ ಬೆಳೆಗಳ ಖರೀದಿಗೆ 1.2 ಲಕ್ಷ ಕೋಟಿ ರೂ.ಪಾವತಿಯಾಗಿದೆ. ಇಂಥ ಅಂಕಿಅಂಶಗಳು ಸರ್ಕಾರದ ಬಳಿ ದಂಡಿಯಾಗಿರುತ್ತವೆ ಮತ್ತು ಇವುಗಳ ವಿಶ್ವಾಸಾರ್ಹತೆ ಪ್ರಶ್ನಾರ್ಹ.

ಪರಿಸರ ಸಂರಕ್ಷಣೆ ಬಹಳ ಮುಖ್ಯ. ನಿಜ. ಆದರೆ, ಎಥೆನಾಲ್ ಉತ್ಪಾದನೆಯನ್ನು ಮಾತ್ರವೇ ಪರಿಗಣಿಸಿರುವುದರಿಂದ,ಆಹಾರ ಭದ್ರತೆ,ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದ ಮೇಲಿನ ಪರಿಣಾಮಗಳು ನಿರ್ಲಕ್ಷಿತವಾಗಿವೆ.ಜನರಿಗೆ ಆಯ್ಕೆಯ ಸ್ವಾತಂತ್ರ್ಯ ಇರಬೇಕು. ಎಥೆನಾಲ್‌ ಮಿಶ್ರಿತ ಹಾಗೂ ಸಾಧಾರಣ ಪೆಟ್ರೋಲ್‌ ಎರಡೂ ಲಭ್ಯವಾಗಬೇಕು. 80 ಕೋಟಿ ಜನರಿಗೆ ಉಚಿತ ಪಡಿತರ ನೀಡುತ್ತಿರುವ ದೇಶದಲ್ಲಿ ಆಹಾರ ಧಾನ್ಯ ಗಳಿಂದ ಎಥೆನಾಲ್‌ ಉತ್ಪಾದನೆ-ಬಳಕೆ ಒಂದು ಸಾರ್ವಜನಿಕ ದುಸ್ಸಾಹಸ ಮತ್ತು ಜನರ ಮೇಲೆ ವಿನಾಕಾರಣ ಹೊರೆ ಹೇರುತ್ತದೆ. ಇಂಥ ಅರೆಬೆಂದ, ಅವೈಜ್ಞಾನಿಕ, ಜನರ ಮೇಲೆ ಆರ್ಥಿಕ ಹೊರೆ ಹೇರುವ ನೀತಿ  ಅಗತ್ಯವಿದೆಯೇ?

 

 

Journalist,Translator,avid bibliophile

Leave a Reply

Your email address will not be published. Required fields are marked *

Back To Top