ಇಂಡಿಯ ಸೇರಿದಂತೆ ಕಡಿಮೆ-ಮಧ್ಯಮ ಆದಾಯದ ದೇಶಗಳಲ್ಲಿ ಹಾವು ಕಡಿತದಿಂದ ಉಂಟಾಗುವ ಸಾವು ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆ. ದೇಶದಲ್ಲಿ 2024ರಲ್ಲಿ 64,000 ಮಂದಿ ಮೃತಪಟ್ಟಿದ್ದಾರೆ. ಇದು ಜಗತ್ತಿನಲ್ಲಿ ಸಂಭವಿಸುತ್ತಿರುವ ಸಾವುಗಳಲ್ಲಿ ಶೇ.80. ಇದರಿಂದಾಗಿಯೇ ದೇಶವನ್ನು ಹಾವು ಕಡಿತದಲ್ಲಿ ʼಜಗತ್ತಿನ ರಾಜಧಾನಿʼ ಎಂದು ಹೆಸರಿಸಲಾಗಿದೆ. ಈ ಸಮಸ್ಯೆಯ ಮೂಲ-ಹಾವು, ಮಾನವ ಮತ್ತು ಪರಿಸರದ ನಡುವಿನ ಸಂಘರ್ಷ. ಇದು ಸಾಮಾಜಿಕ, ಆರ್ಥಿಕ, ಮಾನವಿಕ, ವೃತ್ತಿ ಸಂಬಂಧಿತ, ಪರಿಸರ ಹಾಗೂ ಧಾರ್ಮಿಕ ಆಯಾಮಗಳಿರುವ ಸಂಕೀರ್ಣ ಸಮಸ್ಯೆ.
ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ಒ) ಹಾವು ಕಡಿತವನ್ನು ಉಷ್ಣ ವಲಯದ ನಿರ್ಲಕ್ಷಿತ ರೋಗ(ಎನ್ಡಿಟಿ) ಎಂದು ವರ್ಗೀಕರಿಸುತ್ತದೆ. 2011ರಲ್ಲಿ ಪ್ರಕಟವಾದ ʻಮಿಲಿಯನ್ ಡೆತ್ ಸ್ಟಡಿʼಯಿಂದ ಈ ಸಮಸ್ಯೆಯ ತೀವ್ರತೆ ಬೆಳಕಿಗೆ ಬಂದಿತು. ಹಾವು ಕಡಿತದಿಂದ ಸಾವುಗಳ ಬಗ್ಗೆ ಗಮನ ಹರಿಸಿದ ಮೊದಲ ಅಧ್ಯಯನ- ಗ್ಲೋಬಲ್ ಬರ್ಡನ್ ಆಫ್ ಡಿಸೀಸಸ್ 2019. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್) ಈ ಸಂಬಂಧ ರಾಷ್ಟ್ರೀಯ ಸಮೀಕ್ಷೆಗೆ ಚಾಲನೆ ನೀಡಿತ್ತು. ಆದರೆ, ಹಾವಿನ ಕಡಿತದ ತಡೆ ಇಲ್ಲವೇ ಅದರಿಂದಾಗುವ ಸಾವು/ಅಂಗವೈಕಲ್ಯವನ್ನು ತಡೆಯಲು ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಲಿಲ್ಲ. 2022ರಲ್ಲಿ 21 ದೇಶಗಳ ಸಂಶೋಧಕರ ತಂಡ ನಡೆಸಿದ ಅಧ್ಯಯನದ ಪ್ರಕಾರ, ದೇಶದಲ್ಲಿ ದಿನವೊಂದಕ್ಕೆ ಅಂದಾಜು 170 ಮಂದಿ ಹಾವಿನ ಕಡಿತದಿಂದ ಸಾಯುತ್ತಿದ್ದಾರೆ. ಅಂದರೆ, ಗಂಟೆಯೊಂದಕ್ಕೆ 7 ಮಂದಿ. ಉತ್ತರಪ್ರದೇಶಕ್ಕೆ ಮೊದಲ ಸ್ಥಾನ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢ ನಂತರದ ಸ್ಥಾನದಲ್ಲಿವೆ. 2.5 ಲಕ್ಷ ಮಂದಿ ಶಾಶ್ವತ ಅಂಗವೈಕಲ್ಯ-ಅಂಗವಿಚ್ಛೇದನಕ್ಕೆ ಒಳಗಾಗುತ್ತಿದ್ದಾರೆ. ಜಾಗತಿಕವಾಗಿ ವಾರ್ಷಿಕ ಅಂದಾಜು 5 ಲಕ್ಷ ಕಡಿತ ಪ್ರಕರಣ, 81,000-1.38 ಲಕ್ಷ ಸಾವು ಮತ್ತು 3 ಲಕ್ಷಕ್ಕೂ ಅಧಿಕ ಜನ ಶಾಶ್ವತ ಅಂಗವೈಕಲ್ಯಕ್ಕೆ ಸಿಲುಕುತ್ತಿದ್ದಾರೆ. ಈ ಸಂಖ್ಯೆಗಳು ನಗಣ್ಯವಲ್ಲ; ಜೊತೆಗೆ, ಇದು ಬಡಜನರ ಸಮಸ್ಯೆ. ಆದ್ದರಿಂದ ಹೆಚ್ಚು ಗಮನ ಸೆಳೆಯುವುದಿಲ್ಲ; ಸಮಸ್ಯೆ ಪರಿಹಾರಕ್ಕೆ ಆದ್ಯತೆ ಸಿಕ್ಕಿಲ್ಲ.
300ಕ್ಕೂ ಅಧಿಕ ಪ್ರಭೇಧ: ದೇಶದಲ್ಲಿ 300ಕ್ಕೂ ಅಧಿಕ ಪ್ರಭೇದದ ಹಾವುಗಳಿದ್ದು, ಇದರಲ್ಲಿ 60 ವಿಷ/ಸೌಮ್ಯ ವಿಷ ಹೊಂದಿವೆ. ಆದರೆ, ಸಾವಿಗೆ ಕಾರಣ ಆಗುತ್ತಿರುವುದು ʻಬಿಗ್ ಫೋರ್ʼ ಎನ್ನಲಾದ ನಾಲ್ಕು ಹಾವುಗಳು-ಕಾಳಿಂಗ(ನಜಾ ನಜಾ. ಕನ್ನಡಕ ಹಾವು, ಏಷ್ಯಾದ ಕಾಳಿಂಗ, ಬೈನೋಸೆಲ್ಲೇಟ್ ಕಾಳಿಂಗ ಇನ್ನಿತರ ಹೆಸರುಗಳು), ಕಟ್ಟು ಹಾವು(ಕಾಮನ್ ಕ್ರೈಟ್, ಬಂಗಾರಸ್ ಸೀರುಲಿಯಸ್), ಗರಗಸ ಹಕ್ಕಳೆಯ ವೈಪರ್(ಸಾ ಸ್ಕೇಲ್ಡ್ ವೈಪರ್, ಎಕಿಸ್ ಕಾರಿನೇಟರ್) ಹಾಗೂ ರಸೆಲ್ಸ್ ವೈಪರ್(ದಬೋವಾ ರಸ್ಸೆಲ್ಲಿ). ಇದರಲ್ಲಿ ಮೊದಲ ಸ್ಥಾನ-ರಸೆಲ್ಸ್ ವೈಪರ್. ಮಳೆಗಾಲದಲ್ಲಿ ಹಾವು ಮೊಟ್ಟೆಯಿಟ್ಟು ಮರಿ ಮಾಡುವ ಸಮಯದಲ್ಲೇ ಕೃಷಿ ಚಟುವಟಿಕೆಗಳು ಹೆಚ್ಚುತ್ತವೆ. ಆದ್ದರಿಂದ ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಹಾವಿನ ಕಡಿತ ಪ್ರಕರಣಗಳು ಅಧಿಕವಾಗುತ್ತವೆ. ನಾಚಿಕೆ ಸ್ವಭಾವದ ಹಾವುಗಳು ತೊಂದರೆಯಾದರೆ ಇಲ್ಲವೇ ಜೀವಕ್ಕೆ ಅಪಾಯವಿದೆ ಎಂದುಕೊಂಡಾಗ ದಾಳಿ ನಡೆಸುತ್ತವೆ. ಪ್ರಭೇದಕ್ಕೆ ಅನುಗುಣವಾಗಿ ಕಡಿತದಿಂದ ಉಸಿರಾಟ ಸಮಸ್ಯೆ, ರಕ್ರಸ್ತಾವ, ಸ್ನಾಯುಗಳ ತಂತುಗಳು ಛಿದ್ರವಾಗುವುದು, ಆಘಾತ, ಅಂಗಾಂಗ ವೈಫಲ್ಯ ಮತ್ತು ಸಾವು ಸಂಭವಿಸುತ್ತದೆ. ಪ್ರತಿವಿಷ ನೀಡದಿದ್ದಲ್ಲಿ ಕೆಲವೇ ಗಂಟೆಗಳಲ್ಲಿ ಸಾವು ಸಂಭವಿಸುತ್ತದೆ. ಹಾವಿನ ವಿಷ ಹಲವು ಪ್ರೋಟೀನ್ ಮತ್ತು ಕಿಣ್ವಗಳ ಮಿಶ್ರಣ. ಜತೆಗೆ, ಪೆಪ್ಟೈಡ್ಗಳು, ಲಿಪಿಡ್, ಕಾರ್ಬೋಹೈಡ್ರೇಟ್ ಹಾಗೂ ಲೋಹದ ಅಣುಗಳು ಇರುತ್ತವೆ. ಇವು ಒಟ್ಟಾಗಿ ಹಲವು ವಿಪರಿಣಾಮಗಳಿಗೆ ಕಾರಣವಾಗುತ್ತವೆ. ಪ್ರತಿಯೊಂದು ಪ್ರಭೇದದ ಹಾವು ತನ್ನದೇ ಆದ ವಿಷ ಉತ್ಪಾದಿಸುತ್ತದೆ. ಇಂಥ ಸೂಕ್ಷ್ಮ ವ್ಯತ್ಯಾಸದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಿಲ್ಲ.
ರಾಜ್ಯದ ಸಮಗ್ರ ಆರೋಗ್ಯ ಮಾಹಿತಿ ವೇದಿಕೆ(ಐಎಚ್ಐಪಿ) ಪ್ರಕಾರ, 2021ರಲ್ಲಿ 950ರಷ್ಟಿದ್ದ ಹಾವಿನ ಕಡಿತ ಪ್ರಕರಣಗಳು 2022ರಲ್ಲಿ 3,439 ಹಾಗೂ 2023ರಲ್ಲಿ 6,587ಕ್ಕೆ ಹೆಚ್ಚಿದವು; ಸಾವಿನ ಸಂಖ್ಯೆ ಶೂನ್ಯದಿಂದ 19 ಮತ್ತು 2024ರಲ್ಲಿ 101 ಸಾವು ಸಂಭವಿಸಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರ ಕಚೇರಿಯು ಹಾವು ಕಡಿತಕ್ಕೆ ಉಪಚಾರ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದೆ. ಜಿಲ್ಲಾ-ತಾಲೂಕು ಆಸ್ಪತ್ರೆಗಳು ಹಾಗೂ ಆಯ್ದ ಸಮುದಾಯ ಕೇಂದ್ರಗಳನ್ನು ಚಿಕಿತ್ಸೆ ಕೇಂದ್ರಗಳೆಂದು ಗುರುತಿಸಿದೆ. ಆಶಾ ಕಾರ್ಯಕರ್ತೆಯರು, ಉಪ ಕೇಂದ್ರದ ಸಿಬ್ಬಂದಿ, ಪ್ರಾಥಮಿಕ ಆರೋಗ್ಯ ಕೇಂದ್ರ/ಸಮುದಾಯ ಆರೋಗ್ಯ ಕೇಂದ್ರ/ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಚಿಕಿತ್ಸೆ ಕುರಿತು ಸೂಚನೆಗಳನ್ನು ನೀಡಿದೆ. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತರಬೇತಾದ ಸಿಬ್ಬಂದಿ ಮತ್ತು ಗುಣಮಟ್ಟದ ಪ್ರತಿವಿಷ ಲಭ್ಯವಿರಬೇಕು. ಜೊತೆಗೆ, ಹಾವು ಕಡಿದ ವ್ಯಕ್ತಿಗೆ ಅಂದಾಜು 20 ಚುಚ್ಚುಮದ್ದು ಬೇಕಾಗುತ್ತದೆ; ಒಂದಕ್ಕೆ ಬೆಲೆ 500-900 ರೂ. ಆದ್ದರಿಂದ, ಚಿಕಿತ್ಸೆ ದುಬಾರಿ. ಆಸ್ಪತ್ರೆ ತಲುಪುವ ಮುನ್ನವೇ ಹೆಚ್ಚಿನವರು ಮರಣ ಹೊಂದುತ್ತಾರೆ ಮತ್ತು ಒಂದು ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಇಂಥ ಸಾವಿನ ದಾಖಲೀಕರಣ ಆಗದೆ ಇರುವುದರಿಂದ, ಸಾವುಗಳ ನಿಜವಾದ ಅಂಕಿಸಂಖ್ಯೆ ಸಿಗುವುದಿಲ್ಲ.
ಪ್ರತಿವಿಷ ಕೇಂದ್ರೀಕೃತ ಕಾರ್ಯನೀತಿ: ಸರ್ಕಾರಗಳ ಬಹುತೇಕ ಉಪಕ್ರಮಗಳು ಪ್ರತಿವಿಷವನ್ನು ಕೇಂದ್ರೀಕರಿಸಿವೆ. ಈ ಕಾರ್ಯನೀತಿ ಉಳಿದ ಅಂಶಗಳನ್ನು ಕಡೆಗಣಿಸುತ್ತದೆ. ಪ್ರತಿವಿಷಗಳಿಂದ ಜೀವ ಉಳಿಸಬಹುದು. ಆದರೆ, ಹಾವು ಕಚ್ಚಿದ 6 ಗಂಟೆಯೊಳಗೆ ಚುಚ್ಚುಮದ್ದು ಲಭ್ಯವಾಗಬೇಕು. ಆನಂತರ ಸಾವಿನ ಸಂಭವನೀಯತೆ ಹೆಚ್ಚುತ್ತದೆ. ಹೆಚ್ಚಿನ ಹಾವು ಕಡಿತ ಪ್ರಸಂಗ ಸಂಭವಿಸುವ ಹಳ್ಳಿಯಿಂದ ವ್ಯಕ್ತಿಯನ್ನು ಪ್ರಾಥಮಿಕ ಆರೋಗ್ಯ/ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸಾಗಿಸಲು ಆಂಬ್ಯುಲೆನ್ಸ್ ಲಭ್ಯವಿರಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿವಿಷ, ವೆಂಟಿಲೇಟರ್ ಮತ್ತು ರಕ್ತ ಬ್ಯಾಂಕ್ ಸೌಲಭ್ಯ ಇರಬೇಕು. ಗ್ರಾಮೀಣ ಪ್ರದೇಶದಲ್ಲಿ ವಿಷ ಇಳಿಸಲು ʻಮಂತ್ರʼ ಹಾಕಿಸಲು ಮುಂದಾಗುತ್ತಾರೆ. ಮಂತ್ರಕ್ಕೆ ಹೇಗೆ ಮಾವಿನಕಾಯಿ ಉದುರುವುದಿಲ್ಲವೋ ಅದೇ ರೀತಿ ಮಂತ್ರದಿಂದ ವಿಷ ಇಳಿಯುವುದಿಲ್ಲ! ನಕಲಿ ವೈದ್ಯರು ಮತ್ತು ಅವೈಜ್ಞಾನಿಕ ರೋಗೋಪಚಾರದಿಂದ ಚಿಕಿತ್ಸೆ ವಿಳಂಬ ವಾಗುತ್ತದೆ.
ಹಾವಿನ ವಿಷವನ್ನು ದೊಡ್ಡ ಪ್ರಾಣಿಯೊಂದಕ್ಕೆ (ಕುದುರೆ) ಸಣ್ಣ ಪ್ರಮಾಣದಲ್ಲಿ ಚುಚ್ಚಿ, ಸೃಷ್ಟಿಯಾದ ಆಂಟಿಬಾಡಿಗಳನ್ನು ಪ್ರತಿವಿಷವಾಗಿ ಬಳಸಲಾಗುತ್ತದೆ. ಪ್ರತಿವಿಷ ಉತ್ಪಾದನೆಗೆ ಕಾಳಿಂಗ, ಕಟ್ಟು ಹಾವು, ರಸೆಲ್ಸ್ ವೈಪರ್ ಹಾಗೂ ಗರಗಸ ಹಕ್ಕಳೆಯ ವೈಪರ್ ವಿಷ ಬಳಸಲಾಗುತ್ತದೆ. ʻಬಿಗ್ ಫೋರ್ʼ ವಿಷ ಬಳಸಿ ತಯಾರಿಸಿದ ಪ್ರತಿವಿಷಗಳು ಎಲ್ಲ ಹಾವುಗಳ ಕಡಿತಕ್ಕೆ ಪ್ರಯೋಜನಕ್ಕೆ ಬರುವುದಿಲ್ಲ. ಹಾವಿನ ವಿಷದ ಸಂಯೋಜನೆಯು ಅದರ ವಯಸ್ಸು, ಲಿಂಗ, ಪ್ರಭೇದ, ಸೇವಿಸುವ ಆಹಾರ ಮತ್ತು ವಾಸಿಸುವ ಪ್ರದೇಶವನ್ನು ಆಧರಿಸಿರುತ್ತದೆ. ಪ್ರಭೇದವೊಂದರಲ್ಲೇ ವ್ಯತ್ಯಾಸ ಇರುತ್ತದೆ. ಪ್ರಭೇದವೊಂದರ ವಿಷದ ತೀವ್ರತೆಯು ವಯಸ್ಸು ಹಾಗೂ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತದೆ. ಹೀಗಾಗಿ, ಬೇರೆ ಬೇರೆ ಪ್ರಾಂತ್ಯಗಳಿಗೆ ಬೇರೆಯದೇ ಪ್ರತಿವಿಷ ಅಗತ್ಯವಿದೆ. ಅಲ್ಲದೆ, ಪ್ರತಿವಿಷಗಳು ಮನುಷ್ಯನಲ್ಲಿ ಪ್ರತಿಕೂಲವಾಗಿ ಪರಿಣಮಿಸಿ ಅಲರ್ಜಿ ಹಾಗೂ ಸಾವಿನ ಸಾಧ್ಯತೆ ಇದೆ. ಇದರಿಂದಾಗಿಯೇ ವೈದ್ಯರು ಪ್ರತಿವಿಷ ಕೊಡಲು ಹಿಂಜರಿಯುತ್ತಾರೆ. ತಮಿಳುನಾಡಿನ 2 ಜಿಲ್ಲೆಗಳಲ್ಲಿರುವ ಇರುಳರು ಉರಗ ತಜ್ಞ ರೋಮುಲಸ್ ವಿಟೇಕರ್ ನೆರವಿನಿಂದ ಇರುಳ ಹಾವು ಹಿಡಿಯುವವರ ಕೈಗಾರಿಕಾ ಸಹಕಾರ ಸಂಘ ಆರಂಭಿಸಿದ್ದು, ವಿಷ ಸಂಗ್ರಹಿಸಲು ಪರವಾನಗಿ ಪಡೆದು ಕೊಂಡಿದ್ದಾರೆ. ಹಾವುಗಳನ್ನು ಮಡಿಕೆಯಲ್ಲಿ ಕೂಡಿ ಹಾಕಿ, ವಿಷ ಸಂಗ್ರಹಿಸಿ, ಉತ್ಪಾದಕರಿಗೆ ಮಾರಾಟ ಮಾಡುತ್ತಾರೆ. ಈ ವಿಧಾನ ಡಬ್ಯ್ಲುಎಚ್ಒ ನಿಗದಿಪಡಿಸಿದ ಉತ್ತಮ ಉತ್ಪಾದನೆ ಆಚರಣೆ(ಜಿಎಂಒ)ಗೆ ಅನುಗುಣವಾಗಿಲ್ಲ.
ರಾಷ್ಟ್ರೀಯ ಯೋಜನೆ: ಮಾರ್ಚ್ 2024ರಲ್ಲಿ ಎನ್ಎಪಿಸಿಇ(ನ್ಯಾಷನಲ್ ಆಕ್ಷನ್ಪ್ಲಾನ್ ಫಾರ್ ಪ್ರಿವೆನ್ಷನ್ ಆಂಡ್ ಕಂಟ್ರೋಲ್ ಆಫ್ ಸ್ನೇಕ್ ಬೈಟ್ ಎನ್ವಿನಾಮಿಂಗ್ ಇನ್ ಇಂಡಿಯಾ, ಹಾವಿನ ಕಡಿತದಿಂದ ವಿಷ ಸೇರ್ಪಡೆ ತಡೆ ಮತ್ತು ನಿಯಂತ್ರಣಕ್ಕೆ ರಾಷ್ಟ್ರೀಯ ಕ್ರಿಯಾಯೋಜನೆ) ಹಾವಿನ ಕಡಿತವನ್ನು ʻಅಧಿಸೂಚಿತ ಕಾಯಿಲೆʼ ಎಂದು ಪರಿಗಣಿಸಲು ಎಲ್ಲ ರಾಜ್ಯಗಳಿಗೆ ಸೂಚಿಸಿತು. ಪ್ರತಿವಿಷಕ್ಕೆ ಉತ್ತಮ ಪರ್ಯಾಯದ ಅಭಿವೃದ್ಧಿ, ಪ್ರತಿವಿಷದ ಶೋಧನೆಯಲ್ಲಿ ತೊಡಗಿ ಕೊಂಡಿರುವ ಸ್ಟಾರ್ಟ್ಅಪ್ಗಳಿಗೆ ನೆರವು, ಹಾವುಗಳ ರಕ್ಷಣೆ ಆಪ್ ಮತ್ತು ಉರಗೋದ್ಯಾನಗಳ ಸ್ಥಾಪನೆ ಇದರ ಉದ್ದೇಶ. ಕರ್ನಾಟಕ ಈ ಸಂಬಂಧ ಫೆಬ್ರವರಿ 2024ರಲ್ಲಿ ಸೂಚನೆ ಪ್ರಕಟಿಸಿತು. ಆದರೆ, ಇಂಥ ಸಾವಿನಲ್ಲಿ ಶೇ.70ರಷ್ಟು ಸಂಭವಿಸುವ 9 ರಾಜ್ಯಗಳು ʻಅಧಿಸೂಚಿತ ಕಾಯಿಲೆʼ ಎಂದು ಗುರುತಿಸಿಲ್ಲ. ಮಧ್ಯಪ್ರದೇಶದಲ್ಲಿ ʻಸ್ಥಳೀಯ ಅವಘಡʼ ಎಂದು ಪರಿಗಣಿಸಿ, ಮೃತನ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತದೆ. ಉತ್ತರಪ್ರದೇಶವು 2021ರಲ್ಲಿ ʻರಾಜ್ಯ ವಿಪತ್ತುʼ ಎಂದು ಘೋಷಿಸಿದ್ದು, 4 ಲಕ್ಷ ರೂ. ಪರಿಹಾರ ನೀಡುತ್ತಿದೆ.
ನೂತನ ಉಪಕ್ರಮಗಳು: ಕರ್ನಾಟಕ ಸರ್ಕಾರ ಮತ್ತು ಎವಲ್ಯೂಷನರಿ ವೆನಮಿಕ್ಸ್ ಪ್ರಯೋಗಾಲಯ(ಇವಿಎಲ್) ಒಟ್ಟಾಗಿ 7 ಕೋಟಿ ರೂ ವೆಚ್ಚದಲ್ಲಿ ವಿಷಂ(ವೆನಂ ಇನ್ಸ್ಟಿಟ್ಯೂಟ್ ಫಾರ್ ಸ್ನೇಕ್ಬೈಟ್ ಹೆಲ್ಪ್ ಆಂಡ್ ಅಡ್ವಾನ್ಸ್ಡ್ ಮೆಡಿಸಿನ್) ಆರಂಭಿಸಿವೆ. ಇಲ್ಲಿ ದೇಶದೆಲ್ಲೆಡೆಯ ವಿಷದ ಹಾವುಗಳನ್ನು ಸಂಗ್ರಹಿಸಿ, ಉತ್ತಮ ಗುಣಮಟ್ಟದ ಪ್ರತಿವಿಷವನ್ನು ಉತ್ಪಾದಿಸಲು ಉದ್ದೇಶಿಸಲಾಗಿದೆ. ಪ್ರತಿವಿಷವನ್ನು ಕೃತಕವಾಗಿ ತಯಾರಿಸುವ ಪ್ರಯತ್ನಗಳೂ ನಡೆಯುತ್ತಿವೆ. ಇವು ಪ್ರಾಣಿಜನ್ಯ ಪ್ರತಿವಿಷದಂತೆ ಅಲರ್ಜಿ ಮತ್ತಿತರ ವಿಪರಿಣಾಮ ಬೀರುವುದಿಲ್ಲ. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಎವಲ್ಯೂಷನರಿ ವೆನಮಿಕ್ಸ್ ಪ್ರಯೋಗಾಲಯವು ಪಶ್ಚಿಮ ಭಾರತಕ್ಕೆ ಹಾಗೂ ತೇಜ್ಪುರ ವಿಶ್ವವಿದ್ಯಾನಿಲಯದ ತಂಡವೊಂದು ಈಶಾನ್ಯ ರಾಜ್ಯಗಳಿಗೆ ಸೂಕ್ತವಾದ ಪ್ರತಿವಿಷವನ್ನು ಸಂಶೋಧಿಸುವ ಪ್ರಯತ್ನ ನಡೆಸುತ್ತಿದೆ. ಕೇರಳ ಸರ್ಕಾರ ರೂಪಿಸಿರುವ ಸರ್ಪ(ಸ್ನೇಕ್ ಅವೇರ್ನೆಸ್ ರೆಸ್ಕ್ಯೂ ಆಂಡ್ ಪ್ರೊಟೆಕ್ಷನ್ ಆಪ್) 50,000ಕ್ಕೂ ಅಧಿಕ ಹಾವುಗಳ ಜೀವ ಉಳಿಸಿದೆ. ಆಪ್ ರೈತರನ್ನು ಹಾವು ಹಿಡಿಯುವವರೊಂದಿಗೆ ಜೋಡಿಸುತ್ತದೆ. ಇದರಿಂದ ರೈತರು-ಹಾವುಗಳ ಜೀವಹಾನಿ ತಪ್ಪುತ್ತಿದೆಯಲ್ಲದೆ, ಯಾವ ಪ್ರದೇಶದಲ್ಲಿ ಯಾವ ಪ್ರಭೇದದ ಹಾವುಗಳು ಇವೆ ಎಂಬ ಮಾಹಿತಿ ಲಭ್ಯವಾಗುತ್ತಿದೆ; ಸೂಕ್ತ ಕಾರ್ಯಯೋಜನೆ ರೂಪಿಸಲು ನೆರವಾಗುತ್ತಿದೆ.
ಹವಾಮಾನ ಬದಲಾವಣೆಯಿಂದ ದೇಶದಲ್ಲಿ ಹಾವುಗಳ ಸಂಖ್ಯೆ ಹೆಚ್ಚಲಿದೆ. ʻದ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ʼನಲ್ಲಿ ಪ್ರಕಟಿತ ಅಧ್ಯಯನ(2021)ವು ಹವಾಮಾನ ಬದಲಾವಣೆಯಿಂದ ಅಮೆಜಾನ್ನಲ್ಲಿ ಹಾವಿನ ಪ್ರಭೇದಗಳು ಕಡಿಮೆಯಾಗುತ್ತವೆ ಮತ್ತು ಅಧಿಕ ಕೃಷಿ ಭೂಮಿ ಇರುವ ಭಾರತದಲ್ಲಿ ಹೆಚ್ಚುತ್ತವೆ. ಕಡಿಮೆ ಆದಾಯ ಹಾಗೂ ಗ್ರಾಮೀಣರು ಹೆಚ್ಚು ಸಂಖ್ಯೆಯಲ್ಲಿರುವುದರಿಂದ, ಹಾವು ಕಡಿತ ಪ್ರಕರಣಗಳು ಹೆಚ್ಚಲಿವೆ ಎಂದಿದೆ. ವಿಶ್ವ ಆರೋಗ್ಯ ಸಂಸ್ಥೆ 2017ರಲ್ಲೇ ಹಾವು ಕಡಿತವನ್ನು ʻಉಷ್ಣ ವಲಯದ ನಿರ್ಲಕ್ಷಿತ ಕಾಯಿಲೆʼ ಎಂದು ಗುರುತಿಸಿತ್ತು. ಆಫ್ರಿಕದಲ್ಲಿ ನಮ್ಮ ದೇಶಕ್ಕಿಂತ ವಿಷದ ಹಾವುಗಳ ಅಧಿಕ ಪ್ರಭೇದಗಳಿದ್ದರೂ, ಜನದಟ್ಟಣೆ ಕಡಿಮೆ ಇರುವುದರಿಂದ ಸಾ ವಿನ ಪ್ರಮಾಣ ಕಡಿಮೆ ಇದೆ. ಹಾವಿನಿಂದ ಕಡಿಸಿಕೊಂಡ ವ್ಯಕ್ತಿ 10 ಚುಚ್ಚುಮದ್ದು ತೆಗೆದುಕೊಳ್ಳಬೇಕಾಗುತ್ತದೆ. ಬೆಲೆ 10 ಮಿಲಿಲೀಟರಿಗೆ 500-900 ರೂ. ಇದ್ದು, ಹೆಚ್ಚಿನ ಗ್ರಾಮೀಣರ ಕೈಗೆ ಎಟಕುವುದಿಲ್ಲ.
ಹಾವುಗಳ ಕಡಿತದಿಂದ ಆಗುವ ಸಾವುಗಳನ್ನು ಕಡಿಮೆ ಮಾಡಬಹುದು ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. 1800ರ ಅಂತ್ಯಭಾಗದಲ್ಲಿ ಸರ್ಜನ್ ಜನರಲ್ ಆಗಿದ್ದ ಡಾ.ಜೋಸೆಫ್ ಫೇರಲ್, ನೇಚರ್ ಪತ್ರಿಕೆಯಲ್ಲಿ ಪ್ರಕಟಿಸಿದ ʼಡಿಸ್ಟ್ರಕ್ಷನ್ ಆಫ್ ಲೈಫ್ ಇನ್ ಇಂಡಿಯಾ ಬೈ ಪಾಯ್ಸನಸ್ ಸ್ನೇಕ್ಸ್ʼ ಲೇಖನದಲ್ಲಿ ಬೇರೆ ಬೇರೆ ಹಾವುಗಳ ವಿಷಗಳು ಹೇಗೆ ವರ್ತಿಸುತ್ತವೆ ಮತ್ತು ಅಂಥ ಸಾವುಗಳನ್ನು ಹೇಗೆ ತಡೆಯಬಹುದು ಎಂದು ವಿವರಿಸಿ ದ್ದರು. ಹಾವಿನ ಕಡಿತ ತಪ್ಪಿಸುವ ಅತ್ಯುತ್ತಮ ಕ್ರಮವೆಂದರೆ, ತಡೆ. ಆದರೆ, ಜಮೀನಿನಲ್ಲಿ ಬರಿಗೈಯಲ್ಲಿ ಕೆಲಸ ಮಾಡುವ, ಬರಿಗಾಲಿನಲ್ಲಿ ನಡೆಯುವ ಹಾಗೂ ರಾತ್ರಿ ವೇಳೆ ಟಾರ್ಚ್ ಇಲ್ಲದೆ ಹೊರಗೆ ಹೋಗುವ ಪರಿಸ್ಥಿತಿ ಇರುವಾಗ, ಹಾವಿನ ಕಡಿತ ತಡೆಯುವುದು ಕಷ್ಟಕರ. ಈ ಸಂಬಂಧ ಜಾಗೃತಿ ಮೂಡಿಸಬೇಕು ಮತ್ತು ಶಿಕ್ಷಣ ನೀಡಬೇಕು. ಮೃತಪಟ್ಟಲ್ಲಿ ನೀಡುವ ಪರಿಹಾರದ ಸಣ್ಣ ಪಾಲಿನಲ್ಲಿ ಇದಕ್ಕೆ ತಗಲುವ ವೆಚ್ಚವನ್ನು ಭರಿಸಬಹುದು. ಕಡಿಸಿಕೊಂಡವರಲ್ಲಿ ಹೆಚ್ಚಿನವರು ಆಸ್ಪತ್ರೆ ತಲುಪುವ ಮುನ್ನವೇ ಸಾಯುತ್ತಾರೆ ಮತ್ತು ಒಂದುವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟರೆ ಇಂಥ ಸಾವಿನ ದಾಖಲೀಕರಣ ಆಗದೆ ಇರುವುದರಿಂದ, ಸಾವುಗಳ ನಿಜವಾದ ಅಂಕಿಸಂಖ್ಯೆ ಸಿಗುತ್ತಿಲ್ಲ.
ಜಗತ್ತಿನ ಫಾರ್ಮಸಿ ಎಂದು ಕೊಚ್ಚಿಕೊಳ್ಳುವ ದೇಶಕ್ಕೆ ಪರಿಣಾಮಕಾರಿ ಮತ್ತು ಅಗ್ಗದ ಪ್ರತಿವಿಷವನ್ನು ಉತ್ಪಾದಿಸುವುದು ಕಷ್ಟವೇನಲ್ಲ; ಆದರೆ, ಕೆಲವೇ ಕೆಲವು ಔಷಧ ಉತ್ಪಾದಕರು ಪ್ರತಿವಿಷ ತಯಾರಿಸುತ್ತಿದ್ದಾರೆ. ಹೆಚ್ಚು ಲಾಭ ಇಲ್ಲದೆ ಇರುವುದರಿಂದ, ಉತ್ಪಾದಕ ಕಂಪನಿಗಳು ಹಿಂಜರಿಯುತ್ತಿವೆ. ಜತೆಗೆ, ಪ್ರಾಥಮಿಕ ಆರೋಗ್ಯ ವ್ಯವಸ್ಥೆಯ ಸಮಗ್ರ ಸಬಲೀಕರಣ ಆಗಬೇಕಿದೆ. ಆರೋಗ್ಯ ಸೇವೆ ಎಲ್ಲರಿಗೂ ಲಭ್ಯವಾಗಬೇಕು ಮತ್ತು ಸೇವೆಯ ಗುಣಮಟ್ಟ ಹೆಚ್ಚಬೇಕು. ಪ್ರದೇಶವಾರು ವಿಷ ಸಂಗ್ರಹ/ಉತ್ಪಾದನೆ, ಪರಿಣಾಮಕಾರಿ ರೋಗೋಪಚಾರ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸಲು ವೈದ್ಯರು/ವಿಜ್ಞಾನಿಗಳು ಮುಂದಾಗಬೇಕು. ಆರೋಗ್ಯ ಮೂಲಸೌಲಭ್ಯ ನಿರ್ಮಾಣ ಮತ್ತು ಅವು ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು. ಪ್ರತಿವಿಷ ತಯಾರಿಸಲು ಔಷಧ ಉತ್ಪಾದಕ ಕಂಪನಿಗಳಿಗೆ ಆರ್ಥಿಕ ನೆರವು ನೀಡಬೇಕು. ಹಾವು ಹಿಡಿಯುವವರಿಗೆ ಪ್ರೋತ್ಸಾಹಧನ ನೀಡುವ ಮೂಲಕ ಕಡಿತದ ಪ್ರಕರಣಗಳನ್ನು ಕಡಿಮೆಗೊಳಿಸಬೇಕು.
ಭೂಮಿ ಮತ್ತು ಕೃಷಿ ಇರುವವರೆಗೆ ಹಾವುಗಳು ಇರುತ್ತವೆ; ಇಲಿ ಸೇರಿದಂತೆ ದಂಶಕಗಳನ್ನು ಭಕ್ಷಿಸುವ ಮೂಲಕ ಅವುಗಳ ಸಂಖ್ಯೆಯನ್ನು ನಿಯಂತ್ರಿಸಿ, ಪರಿಸರ ಸಮತೋಲನ ಸಾಧಿಸುತ್ತವೆ; ಆಹಾರವನ್ನು ಸಂರಕ್ಷಿಸುತ್ತವೆ. ಹಾವುಗಳ ರಕ್ಷಣೆ ಜೊತೆಗೆ ರೈತರೂ ಉಳಿಯುವಂತೆ ಮಾಡಬೇಕಿದೆ. ಆದರೆ, ಆರೋಗ್ಯ-ಕುಟುಂಬ ಕಲ್ಯಾಣ, ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿಮೆಯಾಗುತ್ತಿರುವ ದೇಶದಲ್ಲಿ ಇದನ್ನು ಸಾಧಿಸುವುದು ಹೇಗೆ?

