ಕೇರಳ ಈ ಕೀಟನಾಶಕವನ್ನು 2011ರಲ್ಲಿ ನಿಷೇಧಿಸಿತ್ತು. ಆದರೆ, ಕೇರಳ ಹೈಕೋರ್ಟ್ ಫೆಬ್ರವರಿ 2022ರಲ್ಲಿ ನಿಷೇಧವನ್ನು ತೆಗೆದುಹಾಕಿತು. ಆನಂತರ ಒಡಿಷಾ ಅಕ್ಟೋಬರ್ 2023ರಲ್ಲಿ, ಬಳಿಕ ತೆಲಂ ಗಾಣ ಏಪ್ರಿಲ್ 1, 2026ರಲ್ಲಿ ಹಾಗೂ ಆಂಧ್ರಪ್ರದೇಶ ಜೂನ್ 2026ರಲ್ಲಿ ನಿಷೇಧಿಸಿದವು. ಅದೇ ಜಗತ್ತಿನಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಮತ್ತು ತೀವ್ರ ವಿಷಕರ ಕಳೆನಾಶಕ ಪ್ಯಾರಕ್ವಾಟ್ ಡೈ ಕ್ಲೋರೈಡ್(ರಸಾಯನಿಕ ಹೆಸರು-1,1 ಡೈಮೀಥೈಲ್ 4,4 ಬೈಪಿರಿಡಿನಿಯಂ ಡೈಕ್ಲೋರೈಡ್ ಅಥವಾ ಮೀಥೈಲ್ ವಯಲೋಜೆನ್).
2013ರಲ್ಲಿ ಕೃಷಿ ಸಚಿವಾಲಯ ನೇಮಿಸಿದ ಅನುಪಮ್ ವರ್ಮಾ ನೇತೃತ್ವದ ಪರಿಣತ ಪರಿಶೀಲನಾ ಸಮಿತಿಯು ಇತರ ದೇಶಗಳಲ್ಲಿ ನಿಷೇಧಿತ, ನಿರ್ಬಂಧಿತ ಅಥವಾ ಮಾರುಕಟ್ಟೆಯಿಂದ ಹಿಂತೆಗೆದು ಕೊಂಡ 66 ನಿರ್ದಿಷ್ಟ ಕೀಟನಾಶಕಗಳ ತಾಂತ್ರಿಕ ಪರಿಶೀಲನೆ ನಡೆಸುವ ಉದ್ದೇಶ ಹೊಂದಿತ್ತು. ಸಮಿತಿ ತನ್ನ ವರದಿಯಲ್ಲಿ ಈ ಕಳೆನಾಶಕವು ಶ್ವಾಸಕೋಶದ ನಾರುಗಟ್ಟುವಿಕೆ, ಮೂತ್ರಜನಕಾಂಗದ ವೈಫಲ್ಯ ಹಾಗೂ ಪಾರ್ಕಿನ್ಸನ್ ರೋಗಕ್ಕೆ ಕಾರಣವಾಗಬಹುದು ಎಂದು ಹೇಳಿತ್ತು. ಆನಂತರ ಸರ್ಕಾರ ಇನ್ನೊಂದು ಉಪಸಮಿತಿಯನ್ನು ನೇಮಿಸಿ, ಕಳೆನಾಶಕದ ಸುರಕ್ಷತೆ, ಕ್ಷಮತೆ ಹಾಗೂ ವಿಷಯುಕ್ತತೆಯ ಪುನ ರಾವಲೋಕನಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪ್ಯಾರಕ್ವಾಟ್ ಮೇಲೆ ನಿಷೇಧ ಹೇರುವ ಸಾಧ್ಯತೆಯಿದೆ.
ಕೀಟನಾಶಕ, ಬಿತ್ತನೆ ಬೀಜ ಹಾಗೂ ರಸಾಯನಿಕ ಗೊಬ್ಬರ ಉದ್ಯಮ ಭಾರಿ ಆರ್ಥಿಕ ಬಾಹುಬಲ ಹೊಂದಿದ್ದು, ಕೃಷಿ ಕ್ಷೇತ್ರ ಈ ಒಕ್ಕೂಟಕ್ಕೆ ಒತ್ತೆಯಾಳು ಆಗಿಬಿಟ್ಟಿದೆ. ಕೇಂದ್ರೀಯ ಕೀಟನಾಶಕ ಮಂಡಳಿ ಹಾಗೂ ನೋಂದಣಿ ಸಮಿತಿ(ಸಿಐಬಿಆರ್ಸಿ) ಅಡಿ ಕೀಟನಾಶಕ, ಕಳೆನಾಶಕ ಹಾಗೂ ಶಿಲೀಂಧ್ರನಾಶಕ ಸೇರಿದಂತೆ 290ಕ್ಕೂ ಅಧಿಕ ಕೃಷಿ ರಸಾಯನಿಕಗಳು ನೋಂದಣಿಯಾಗಿದ್ದು, ಸಾವಿರಾರು ವಾಣಿಜ್ಯಿಕ ಹೆಸರಿನಿಂದ ಮಾರಾಟವಾಗುತ್ತಿವೆ. ದೇಶದಲ್ಲಿ 30ಕ್ಕೂ ಅಧಿಕ ಕೃಷಿ ರಸಾಯನಿಕಗಳು ನಿಷೇಧಿಸಲ್ಪಟ್ಟಿವೆ; ಆದರೆ, ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕದಲ್ಲಿ ಸಂಪೂರ್ಣ ನಿಷೇಧವಾಗಿರುವ ಕಾರ್ಬೋಫ್ಯುರಾನ್, ಪ್ಯಾರಕ್ವಾಟ್ ಮತ್ತಿತರ ಕೀಟನಾಶಕಗಳು ಇಂದಿಗೂ ಬಳಕೆಯಾಗುತ್ತಿವೆ. ದೇಶದ ಕೀಟನಾಶಕ ಉದ್ಯಮದ ವಾರ್ಷಿಕ ವಹಿವಾಟು 80,000 ಕೋಟಿ ರೂ.; ಪ್ರತಿವರ್ಷ 140 ದೇಶ ಗಳಿಗೆ 5 ಶತಕೋಟಿ ಡಾಲರ್ ಮೌಲ್ಯದ ಸರಕು ರಫ್ತು ಆಗುತ್ತಿದೆ. ಪರಾಕ್ವಾಟ್ ವಾರ್ಷಿಕ ವಹಿವಾಟು 1,500 ಕೋಟಿ ರೂ. ಇದ್ದು, 1,500ಕ್ಕೂ ಹೆಚ್ಚು ಉತ್ಪಾದಕರು ತಯಾರಿಸುತ್ತಿದ್ದಾರೆ.
ವ್ಯಾಪಕ ಬಳಕೆ: ಟೀ, ರಬ್ಬರ್, ಕಾಫಿ, ಹತ್ತಿ, ಭತ್ತ, ಗೋಧಿ, ಜೋಳ, ಆಲೂಗಡ್ಡೆ, ದ್ರಾಕ್ಷಿ ಮತ್ತು ಸೇಬು ಕೃಷಿಯಲ್ಲಿ ಹಾಗೂ ನಾಲೆ, ಕೆರೆಗಳು ಹಾಗೂ ಜಲ ಮಾರ್ಗದಲ್ಲಿ ಕಳೆ ನಿವಾರಣೆಗೆ ಪ್ಯಾರಕ್ವಾಟ್ ಬಳಕೆಯಾಗುತ್ತಿದೆ. ಬಣ್ಣರಹಿತ, ರುಚಿರಹಿತ ದ್ರವ; ʻನಾನ್ ಸೆಲೆಕ್ಟಿವ್ ಕಾಂಟ್ಯಾಕ್ಟ್ ಹರ್ಬಿಸೈಡ್ʼ(ಅಂದರೆ, ಎಲ್ಲ ಸಸ್ಯಗಳನ್ನು ಯಾವುದೇ ಭೇದಭಾವವಿಲ್ಲದೆ ಸಂಪರ್ಕದ ಮೂಲಕ ನಾಶ ಮಾಡುತ್ತದೆ); ಕಳೆ ಹಾಗೂ ಕೃಷಿ ಉಳಿಕೆ(ಕೂಳೆ, ಕಬ್ಬಿನ ರವದಿ ಇತ್ಯಾದಿ)ಯನ್ನು ನಾಶ ಮಾಡುತ್ತದೆ. ಸುಲಭ ಲಭ್ಯತೆ, ಶೀಘ್ರವಾಗಿ ಕಾರ್ಯ ನಿರ್ವಹಣೆ ಮತ್ತು ಕಡಿಮೆ ದರ(ಲೀಟರಿಗೆ ಸುಮಾರು 280 ರೂ.)ದಿಂದಾಗಿ ದೇಶಾದ್ಯಂತ ಬಳಕೆಯಲ್ಲಿದೆ. ಈ ಕಳೆನಾಶಕ ಸಾವಿರಾರು ಜನರ ಸಾವಿಗೆ ಕಾರಣವಾಗಿದೆ ಎಂದು ಜಗತ್ತಿನೆಲ್ಲೆಡೆಯ ಆಸ್ಪತ್ರೆಗಳ ಶವಪರೀಕ್ಷೆ ವರದಿಗಳು ಹೇಳುತ್ತವೆ. ಹೀಗಾಗಿ, 74 ದೇಶಗಳಲ್ಲಿ ನಿಷೇಧಿಸ ಲ್ಪಟ್ಟಿದೆ. ದ ನ್ಯಾಷನಲ್ ಜರ್ನಲ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಚರ್ಮ, ಆಹಾರ ಇಲ್ಲವೇ ಉಸಿರಾಟದ ಮೂಲಕ ದೇಹದ ಒಳಸೇರುವ ಪ್ಯಾರಕ್ವಾಟ್ ತೀವ್ರ ವಿಷ; ಗಂಭೀರ ಆರೋಗ್ಯ ಸಮಸ್ಯೆ ಮತ್ತು ಸಾವಿಗೆ ಕಾರಣವಾಗುತ್ತದೆ. ಫಲವತ್ತತೆ ಕುಸಿತ, ಗರ್ಭಪಾತದ ಸಾಧ್ಯತೆ, ಜನನ ದೋಷ ಮತ್ತು ಮಕ್ಕಳಲ್ಲಿ ಬೆಳವಣಿಗೆ ವಿಳಂಬದ ಸಾಧ್ಯತೆ ಇದೆ. ಆಹಾರ ಮತ್ತು ಪರಿಸರದ ಮೂಲಕ ಇದರ ಶೇಷಾಂಶ ಗರ್ಭಾಶಯದಲ್ಲಿ ಶೇಖರಗೊಳ್ಳಬಹುದು. ಇತ್ತೀಚೆಗೆ ತಾಯಿ ಮಾಸಿನ ದ್ರವದಲ್ಲೂ ಕೀಟನಾಶಕ ಪತ್ತೆಯಾದ ವರದಿ ಆಗಿತ್ತು. ಕೀಟನಾಶಕದ ಶೇಷಾಂಶ ಇದೆ ಎಂದು ದೇಶದಿಂದ ರಫ್ತಾದ ಉತ್ಪನ್ನಗಳು ತಿರಸ್ಕೃತವಾದ ಹಲವು ಪ್ರಸಂಗಗಳು ನಡೆದಿವೆ.
ಕೇರಳ 2011ರಲ್ಲಿ ಪ್ಯಾರಕ್ವಾಟ್ ಸೇರಿದಂತೆ 13 ಕೀಟನಾಶಕಗಳನ್ನು ನಿಷೇಧಿಸಿತು. ಏಲಕ್ಕಿ ಬೆಳೆಗಾರರ ಒಕ್ಕೂಟ ನಿಷೇಧವನ್ನು ಪ್ರಶ್ನಿಸಿ, ಅರ್ಜಿ ಸಲ್ಲಿಸಿತು. ಕೀಟನಾಶಕ ಕಾಯಿದೆಯ ವಿಭಾಗ 27ರಡಿ ರಾಜ್ಯ ಸರ್ಕಾರಕ್ಕೆ 90 ದಿನಕ್ಕಿಂತ ಹೆಚ್ಚು ಕಾಲ ನಿಷೇಧಿಸುವ ಅಧಿಕಾರ ಇಲ್ಲ ಎಂಬ ತಾಂತ್ರಿಕ ಕಾರಣ ನೀಡಿ ಕೇರಳ ಹೈಕೋರ್ಟ್ ಫೆಬ್ರವರಿ 2022ರಲ್ಲಿ ನಿಷೇಧವನ್ನು ತೆಗೆದುಹಾಕಿತು. ಆನಂತರ ಒಡಿಷಾ 2023 ರಲ್ಲಿ ನಿಷೇಧ ಹೇರಿತು. ತೆಲಂಗಾಣ ಏಪ್ರಿಲ್ 1, 2026ರಿಂದ ಅನ್ವಯವಾಗುವಂತೆ 60 ದಿನ ನಿಷೇಧಿಸಿತಲ್ಲದೆ, ಶಾಸನಸಭೆಯಲ್ಲಿ ಉಭಯಪಕ್ಷೀಯ ಠರಾವು ಅಂಗೀಕರಿಸಿ ದೇಶಾದ್ಯಂತ ನಿಷೇಧಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರಿತು. ಬಳಿಕ ಆಂಧ್ರಪ್ರದೇಶ ಮೇ 2026ರಲ್ಲಿ ಮಾರಾಟ, ವಿತರಣೆ, ಉತ್ಪಾದನೆ ಹಾಗೂ ಬಳಕೆಯನ್ನು ನಿಷೇಧಿಸಿತು. ತೆಲಂಗಾಣದಲ್ಲಿ ಪ್ಯಾರಕ್ವಾಟ್ ವಿರುದ್ಧ ಆಂದೋಲನ ರೂಪಿಸಿದ್ದು-ಡಾಕ್ಟರ್ಸ್ ಎಗೇನ್ಸ್ಟ್ ಪರಾಕ್ವಾಟ್. ರಾಜ್ಯದೆಲ್ಲೆಡೆಯ 202 ವೈದ್ಯರನ್ನು ಒಳಗೊಂಡ ಒಕ್ಕೂಟ. ಕೇರಳಂನಲ್ಲಿ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಹೊರತುಪಡಿಸಿ, ಸಣ್ಣ ವಾಣಿಜ್ಯ ವೇದಿಕೆಗಳಲ್ಲಿ ಈಗಲೂ ಪರಾಕ್ವಾಟ್ ಲಭ್ಯವಾಗುತ್ತಿದೆ. ಎಲ್ಲ ಇ-ವಾಣಿಜ್ಯ ವೇದಿಕೆಗಳನ್ನು ಒಳಗೊಳ್ಳದೆ ರಾಜ್ಯವೊಂದು ಹೇರಿರುವ ನಿಷೇಧವು ಕಾಗದದ ಮೇಲಷ್ಟೇ ಉಳಿಯುತ್ತದೆ. ಇದನ್ನು ತಡೆಯಬೇಕೆಂದರೆ ಕೇಂದ್ರ ಸರ್ಕಾರ ಪ್ರಬಲ ಕಾನೂನು ರಚಿಸುವುದಲ್ಲದೆ, ಪರಿಣಾಮಕಾರಿ ನಿಯಂತ್ರಣ ಹಾಗೂ ಅನುಷ್ಠಾನ ವ್ಯವಸ್ಥೆಯನ್ನು ರೂಪಿಸಬೇಕಿದೆ.
ಕೀಟನಾಶಕವಾಗಿ ಬದಲಾದ ಬಣ್ಣ: ಪ್ಯಾರಕ್ವಾಟ್ನ್ನು 1880ರಲ್ಲಿ ರಸಾಯನಿಕ ಬಣ್ಣ ಎಂದು ಅಭಿವೃದ್ಧಿಪಡಿಸಲಾಗಿತ್ತು. 1950ರಲ್ಲಿ ಅದರ ಕಳೆನಾಶಕ ಗುಣಗಳು ಪತ್ತೆಯಾದವು. 1960ರಲ್ಲಿ ಇಂಪೀರಿಯ ಲ್ ಕೆಮಿಕಲ್ ಕಂಪನಿಯು ಗ್ರಾಮಾಕ್ಸೋನ್ ಎಸ್ಎಲ್ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಿತು. ಅದರ ವಿಷ ಪ್ರವೃತ್ತಿ ಬಗ್ಗೆ ಪ್ರಶ್ನೆಗಳು ಶೀಘ್ರವೇ ತಲೆಯೆತ್ತಿದವು. 1989ರಲ್ಲಿ ಲೋಕಸಭೆಯಲ್ಲಿ ಸಿದ್ದಿಪೇಟೆ ಕ್ಷೇತ್ರದ ಸಂಸದ ಡಾ.ವಿಜಯರಾಮರಾವ್(ತೆಲುಗುದೇಶಂ ಪಕ್ಷ), ಈ ವಿಷಯ ಪ್ರಸ್ತಾಪಿಸಿದರು. ಅದರ ಹಾನಿಕರ ಪ್ರವೃತ್ತಿ ಬಗ್ಗೆ ಯಾವುದೇ ವರದಿ ಬಂದಿಲ್ಲ ಎಂದು ಕೃಷಿ ಸಚಿವ ಮಾರುತ್ತರ ನೀಡಿದ್ದರು. ಪ್ಯಾರಕ್ವಾಟ್ನಿಂದ ಕಂಪನಿಗೆ ಗಮನಾರ್ಹ ಆದಾಯ ಬರುತ್ತಿತ್ತು; 1987ರಲ್ಲಿ 15,000 ಟನ್ ಮಾರಾಟದಿಂದ 192 ದಶಲಕ್ಷ ಡಾಲರ್ ವಹಿವಾಟು ನಡೆಸಿತ್ತು. ಆಗಸ್ಟ್ 2025ರಲ್ಲಿ ಲೋಕಸಭೆ ಯಲ್ಲಿ ನೀಡಿದ ಮಾಹಿತಿ ಪ್ರಕಾರ, ದೇಶದಲ್ಲಿ 1,503 ಪ್ಯಾರಕ್ವಾಟ್ ಉತ್ಪಾದಕರು ಇದ್ದಾರೆ. ಸಿಂಜೆಂಟಾ ಅತಿ ದೊಡ್ಡ ಉತ್ಪಾದಕ(2026ರಲ್ಲಿ ಉತ್ಪಾದನೆ ನಿಲ್ಲಿಸುವುದಾಗಿ ಹೇಳಿದೆ), ಅಡಾಮಾ, ಬಿಎಎಸ್ ಎಫ್, ನ್ಯೂಫಾರ್ಮ್, ಯುಪಿಎಎಲ್ ಹಾಗೂ ಸಿನಾನ್ ಜಾಗತಿಕ ಮಟ್ಟದಲ್ಲಿ ದೊಡ್ಡ ಉತ್ಪಾದಕರು. ಧರ್ಮರಾಜ್ ಕ್ರಾಪ್ ಗಾರ್ಡ್ ಲಿ., ಪಾರಿಜಾತ್ ಇಂಡಸ್ಟ್ರೀಸ್, ಚಂಬಲ್ ಫರ್ಟಿಲೈಸರ್ಸ್ ಆಂಡ್ ಕೆಮಿಕಲ್ಸ್, ಈಗಲ್ ಪ್ಲಾಂಟ್ ಪ್ರೊಟೆಕ್ಟ್ ಪ್ರೈ.ಲಿ, ಸ್ಟಾರ್ಟೆಕ್ ಕೆಮಿಕಲ್ಸ್ ಲಿ. ಪ್ರಮುಖ ದೇಶಿ ಉತ್ಪಾದಕರು. ಗ್ರಾಮಾಕ್ಸೋನ್, ಕ್ರಿಸ್ಕ್ವಾಟ್, ಗ್ರಾಮುರಾನ್ ಇತ್ಯಾದಿ ವಾಣಿಜ್ಯಿಕ ಹೆಸರುಗಳಿಂದ ಮಾರಾಟ ಮಾಡಲಾಗುತ್ತಿದೆ.
ಪ್ರತಿವಿಷ ಇಲ್ಲ: ಹಾವಿನ ಕಡಿತಕ್ಕೆ ಪ್ರತಿವಿಷ ಇದೆ ಮತ್ತು ಕೆಲವು ಹಾವಿನ ಕಡಿತದಿಂದ ಜೀವ ಹೋಗುವುದಿಲ್ಲ; ಆದರೆ, ಪ್ಯಾರಕ್ವಾಟ್ ಜೀವಕೋಶಗಳಿಗೆ ಹಾನಿಯುಂಟು ಮಾಡುತ್ತದೆ; ಶ್ವಾಸಕೋಶದಲ್ಲಿ ಸಂಗ್ರಹಗೊಂಡು ನರಗಟ್ಟು ವಿಕೆಯನ್ನು ಪ್ರಚೋದಿಸುತ್ತದೆ; ತೀವ್ರ ಉಸಿರಾಟದ ವೈಫಲ್ಯ, ಮೂತ್ರಪಿಂಡ ವೈಫಲ್ಯ ಮತ್ತು ಯಕೃತ್ತಿನ ಹಾನಿಯುಂಟಾಗುತ್ತದೆ. ಅದಕ್ಕೆ ಪ್ರತಿವಿಷ ಇಲ್ಲ. ಪೆಸ್ಟಿಸೈಡ್ ಆಕ್ಷನ್ ನೆಟ್ವರ್ಕ್(https://pan-india.org/) ಪ್ರಕಾರ, ದೇಶದಲ್ಲಿ ಬಳಸುತ್ತಿರುವ 100ಕ್ಕೂ ಹೆಚ್ಚು ಕೀಟನಾಶಕಗಳು ʻಅತಿ ಹೆಚ್ಚು ಅಪಾಯಕಾರಿʼ(ಎಚ್ಎಚ್ಪಿ); ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸಿದರೂ, ದೀರ್ಘಕಾಲೀನ ಪರಿಣಾಮ ಬೀರುತ್ತವೆ ಅಥವಾ ಪರಿಸರ-ಜೀವಿಗಳಲ್ಲಿ ಬಹು ಕಾಲ ಉಳಿದುಕೊಂಡಿರುತ್ತವೆ. ತೀವ್ರ ವಿಷವೆಂದು ಗೊತ್ತಿದ್ದರೂ, ದೇಶದಲ್ಲಿ ಪ್ಯಾರಕ್ವಾಟ್ ಬಳಕೆ ವರ್ಷೇವರ್ಷೇ ಹೆಚ್ಚುತ್ತಿದೆ. ಲೋಕಸಭೆಯಲ್ಲಿ 2025ರಲ್ಲಿ ಕೃಷಿ ಮತ್ತು ಕೃಷಿಕ ಕಲ್ಯಾಣ ಸಚಿವರು ನೀಡಿದ ಉತ್ತರದ ಪ್ರಕಾರ, ಆಮದು 2019-20ರಲ್ಲಿ 8,598 ಟನ್ನಿಂದ 2022-23ರಲ್ಲಿ 20,786 ಟನ್ಗೆ ಹೆಚ್ಚಿದೆ. ದೇಶದಲ್ಲಿ ಮಾರಾಟ 2023-24ರಲ್ಲಿ 1.13 ಲಕ್ಷ ಟನ್ ಇತ್ತು.
ಆತ್ಮಹತ್ಯೆ, ಹತ್ಯೆಗೆ ಬಳಕೆ: ಆತ್ಮಹತ್ಯೆ, ಹತ್ಯೆ ಇಲ್ಲವೇ ಆಕಸ್ಮಿಕವಾಗಿ ಕೀಟನಾಶಕಗಳ ಸೇವನೆಯಿಂದ ಸಾಯುವವರ ಸಂಖ್ಯೆ ಹೆಚ್ಚಿದೆ. ಎಲ್ಲೆಡೆ, ಎಗ್ಗುತಗ್ಗಿಲ್ಲದೆ ಲಭ್ಯವಾಗುತ್ತಿರುವುದು ಇದಕ್ಕೆ ಕಾರಣ. ಕೇರಳದ ತಿರುವನಂತಪುರದಲ್ಲಿ ಅಕ್ಟೋಬರ್ 2022ರಲ್ಲಿ ಶರೋನ್ ರಾಜ್ ಎಂಬುವರನ್ನು ಅವರ ಸ್ನೇಹಿತೆ ಗ್ರೀಷ್ಮಾ, ಪ್ಯಾರಕ್ವಾಟ್ ಮಿಶ್ರ ಮಾಡಿದ ದ್ರಾವಣ ನೀಡಿ ಕೊಲೆ ಮಾಡಿದ್ದರು. ರಾಜ್ ತಿರುವನಂತಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪ್ರಕರಣ ಕೀಟನಾಶಕಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿತು; ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್ಸಿಆರ್ಬಿ) ವರದಿ ಪ್ರಕಾರ, 2024ರಲ್ಲಿ ಕೀಟನಾಶಕ ಸೇವಿಸಿ 26,921 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಗರಿಷ್ಠ ತೆಲಂಗಾಣ (4,252); ನಂತರದ ಸ್ಥಾನ ಕ್ರಮವಾಗಿ ಮಹಾರಾಷ್ಟ್ರ, ತಮಿಳುನಾಡು ಹಾಗೂ ಆಂಧ್ರಪ್ರದೇಶ (2,871). ರಾಜ್ಯದಲ್ಲಿ 2,613 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಆತ್ಮಹತ್ಯೆಯಲ್ಲಿ ಕೀಟನಾಶಕಗಳಿಂದ ಆದ ಸಾವಿನ ಪ್ರಮಾಣ ಶೇ.15.8. ಹೈದರಾಬಾದಿನ ಗಾಂಧಿ ಆಸ್ಪತ್ರೆಯಲ್ಲಿ 2024-25ರಲ್ಲಿ 217 ವಿಷಪ್ರಾಶನ ಪ್ರಕರಣಗಳು ದಾಖಲಾಗಿದ್ದವು; ಇದರಲ್ಲಿ ಶೇ.54 ರೈತರು ಮತ್ತು ಶೇ.16 ವಿದ್ಯಾರ್ಥಿಗಳು. ಶೇ.94ರಷ್ಟು ಆತ್ಮಹತ್ಯೆ ಪ್ರಕರಣಗಳು ಮತ್ತು ಶೇ.5ರಷ್ಟು ಆಕಸ್ಮಿಕವಾಗಿ ಸಂಭವಿಸಿದಂಥವು. ಒಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 4-5 ಇಂಥ ಪ್ರಕರಣಗಳು ದಾಖಲಾಗುತ್ತಿದ್ದು, ಹೆಚ್ಚಿನವು ಸಾವಿನಲ್ಲಿ ಅಂತ್ಯಗೊಳ್ಳುತ್ತಿವೆ.
ಪ್ಯಾರಕ್ವಾಟ್ನಿಂದ ಹಾನಿ ಕುರಿತು ವೈಜ್ಞಾನಿಕ ಪುರಾವೆಯಿದ್ದರೂ, ಡಿಸೆಂಬರ್ 2025ರಲ್ಲಿ ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ ಕಳೆನಾಶಕದ ಪ್ಯಾಕಿಂಗ್ನಲ್ಲಿ ಸುಧಾರಣೆ, ಬಳಕೆ ಕುರಿತು ಸೂಚನೆ ಮತ್ತು ಒಂದು ವೇಳೆ ಸೇವಿಸಿದಲ್ಲಿ ಏನು ಮಾಡಬೇಕು ಎಂಬ ತರಬೇತಿ ನೀಡುವುದು ಮತ್ತಿತರ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು, ಬಳಕೆಯನ್ನು ಮುಂದುವರಿಸಲು ಅನುಮತಿ ನೀಡಿತು. ಇಷ್ಟಕ್ಕೆ ನಿಲ್ಲಲಿಲ್ಲ; ಏಪ್ರಿಲ್ 16,2026ರಂದು ತನ್ನ 471ನೇ ಸಭೆಯಲ್ಲಿ ಪ್ಯಾರಕ್ವಾಟ್ನ 7 ಹೊಸ ಉತ್ಪನ್ನಗಳಿಗೆ ಅನುಮತಿ ನೀಡಿತು! ನಿರ್ಬಂಧ-ನಿಷೇಧ ಅತ್ತ ಇರಲಿ; ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕೂಡ ಬಳಕೆ ಪರ ನಿಂತಿದೆ. 2013ರಲ್ಲಿ ಬಹುಪಕ್ಷೀಯ ಪರಿಸರ ಒಪ್ಪಂದವಾದ ರಾಟರ್ಡಾಮ್ ಸಮಾವೇಶದ ಪರಿಶಿಷ್ಟ 3 ರಡಿ ಪ್ಯಾರಕ್ವಾಟ್ನ್ನು ʻತೀವ್ರ ವಿಷʼ ಎಂದು ಪಟ್ಟಿ ಮಾಡುವುದನ್ನು ವಿರೋಧಿಸಿತ್ತು. ಪ್ರಸ್ತಾವಕ್ಕೆ 118 ದೇಶಗಳು ಸಮ್ಮತಿ ನೀಡಿದ್ದರೂ, ಎಲ್ಲ ದೇಶಗಳ ಒಪ್ಪಿಗೆ ಅಗತ್ಯ ವಾಗಿದ್ದರಿಂದ ಪ್ರಸ್ತಾವ ಬಿದ್ದುಹೋಯಿತು.
ರೈತರು ಕೃಷಿ ಕಾರ್ಮಿಕರ ಕೊರತೆ ಹಾಗೂ ದುಬಾರಿ ಕೂಲಿಯಿಂದಾಗಿ ಕಳೆನಾಶಕ ಬಳಸುತ್ತಾರೆ. ಹವಾಮಾನ ಬದಲಾವಣೆಯಿಂದಾಗಿ ವಾತಾವರಣದಲ್ಲಿ ಅನಿಶ್ಚಿತತೆ ಹೆಚ್ಚಿರುವುದರಿಂದ, ಕೃಷಿಯನ್ನೇ ನಂಬಿಕೊಂಡಿರುವವರು ಬೆಳೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಕೀಟಗಳು-ಕಳೆಗಳು ಕಾಲಕ್ರಮೇಣ ನಿರೋಧಕ ಶಕ್ತಿ ಬೆಳೆಸಿಕೊಳ್ಳುವುದರಿಂದ ಹಾಗೂ ಕೀಟನಾಶಕಗಳಿಂದ ಆಗಬಹುದಾದ ಹಾನಿ ಬಗ್ಗೆ ಹೆಚ್ಚು ಮಾಹಿತಿ ಇಲ್ಲದೆ ಇರುವುದ ರಿಂದ, ಅವುಗಳ ಯಥೇಚ್ಛ ಬಳಕೆ ಆಗುತ್ತಿದೆ. ಇದರಿಂದ ಕೃಷಿ ವೆಚ್ಚ ಹೆಚ್ಚಿದೆ. ಈಮೊದಲು ರಸಾಯನಿಕ ಗೊಬ್ಬರ-ಕೀಟನಾಶಕಗಳ ಪರ ಬ್ಯಾ ಟಿಂಗ್ ಮಾಡುತ್ತಿದ್ದ ಕೃಷಿ ವಿವಿಗಳು ಈಗ ಸಾವಯವ ಮಂತ್ರ ಪಠಿಸುತ್ತಿವೆ. ವಿವಿಗಳ ಕೃಷಿ ವಿಸ್ತರಣೆ ವ್ಯವಸ್ಥೆ ದುರ್ಬಲವಾಗಿದೆ. ರೈತರಲ್ಲಿ ಕೀಟನಾಶಕ-ರಸ ಗೊಬ್ಬರಗಳ ಹಾನಿ ಬಗ್ಗೆ ಜಾಗೃತಿ ಮೂಡಿ ಸುವಲ್ಲಿ ವಿಫಲವಾಗಿವೆ. ಸಾವಯವ ಕೃಷಿಗೆ ಸರ್ಕಾರ ಬಾಯಿಮಾತಿನ ಬೆಂಬಲ ನೀಡುತ್ತದೆ. ಇದು ಸರ್ಕಾರ ಹಾಗೂ ಕೃಷಿ ವಿಶ್ವವಿದ್ಯಾನಿಲಯಗಳ ವೈಫಲ್ಯ. ಗೊಬ್ಬರ-ಕೀಟನಾಶಕಗಳ ಶೇಷಾಂಶ ಅಂತ ರ್ಜಲ, ಆಹಾರದ ಮೂಲಕ ಮನುಷ್ಯರ ದೇಹವನ್ನು ಸೇರುತ್ತಿದೆ. ಎದೆ ಹಾಲು, ಆಹಾರ ವಿಷಯುಕ್ತವಾಗಿದೆ.

