ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಮರುಪರೀಕ್ಷೆ ನಡೆದಿದೆ. ಸರ್ಕಾರ ಪರೀಕ್ಷೆಗೆ ಮುನ್ನ ಟೆಲಿಗ್ರಾಂಗೆ ತಾತ್ಕಾಲಿಕ ನಿಷೇಧ ಹೇರಿತು; ಆನಂತರ ವಾಟ್ಸ್ಆಪ್ ತರಲು ಯೋಜಿಸಿದ್ದ ʻಯೂಸರ್ನೇಮ್ʼ ಸೌಲಭ್ಯದ ವಿವರ ನೀಡುವಂತೆ ನೋಟಿಸ್ ನೀಡಿತು. ಸದ್ಯಕ್ಕೆ ಜಾರಿಗೊಳಿಸುವುದಿಲ್ಲ ಎಂದು ಬೀಸುವ ದೊಣ್ಣೆಯಿಂದ ವಾಟ್ಸ್ಆಪ್ ತಪ್ಪಿಸಿಕೊಂಡಿದೆ. ಇಂಥದ್ದೇ ನೋಟಿಸ್ ಮೆಟಾ, ಅರಟ್ಟೈ ಹಾಗೂ ಸಿಗ್ನಲ್ಗೂ ರವಾನೆಯಾಗಿದೆ. ದೆಹಲಿ ಹೈಕೋರ್ಟ್ ಕಾಕ್ರೋಚ್ ಜನತಾ ಪಕ್ಷದ ಎಕ್ಸ್ ಖಾತೆಗೆ ಹೇರಿದ್ದ ನಿರ್ಬಂಧ ತೆರವುಗೊಳಿಸಿದೆ. ಗೋದಿ ಮಾಧ್ಯಮಗಳ ಯುಗದಲ್ಲಿ ಜನಸಾಮಾನ್ಯರು ಸಂವಹನಕ್ಕೆ ಬಳಸುತ್ತಿರುವ ಸಾಮಾಜಿಕ ಮಾಧ್ಯಮಗಳ ಉಸಿರು ಕಟ್ಟಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಜೊತೆಗೆ, ಸರ್ಕಾರಕ್ಕೆ ಮಗ್ಗಲುಮುಳ್ಳಾಗಿರುವ ಸ್ವಯಂಸೇವಾ ಸಂಘಟನೆಗಳಿಗೆ ವಿದೇಶಿ ದೇಣಿಗೆ ನಿಯಮಗಳನ್ನು ಬಿಗಿಗೊಳಿಸಲಾಗಿದೆ.
ಯುಪಿಎ-2 ಸರ್ಕಾರ 2010ರಲ್ಲಿ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತೆ ಪರೀಕ್ಷೆ(ನೀಟ್-ಯುಜಿ)ಯನ್ನು ಪರಿಚಯಿಸಿದಾಗ, ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್, ಆಂಧ್ರಪ್ರದೇಶ ಹಾಗೂ ಕರ್ನಾಟಕ ಈ ಕೇಂದ್ರೀ ಕೃತ ವ್ಯವಸ್ಥೆಯನ್ನು ವಿರೋಧಿಸಿದವು. ರಾಜ್ಯ ಸರ್ಕಾರಗಳು, ಖಾಸಗಿ ಹಾಗೂ ಅಲ್ಪಸಂಖ್ಯಾತ ವಿದ್ಯಾಸಂಸ್ಥೆಗಳು ನೀಟ್ ವಿರೋಧಿಸಿ 80ಕ್ಕೂ ಅಧಿಕ ಅರ್ಜಿಗಳನ್ನು ನ್ಯಾಯಾಲಯದಲ್ಲಿ ದಾಖಲಿಸಿದವು. ಜುಲೈ 18, 2013 ರಂದು ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ನೇತೃತ್ವದ ಪೀಠವು 2-1 ಬಹುಮತ ತೀರ್ಪು ನೀಡಿ, ಎಂಬಿಬಿಎಸ್/ಬಿಡಿಸ್ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶವನ್ನು ನಿಯಂತ್ರಿಸುವ ಶಾಸನಾತ್ಮಕ ಅಧಿಕಾರ ಮೆಡಿಕಲ್ ಕೌನ್ಸಿಲ್(ಎಂಸಿಐ) ಹಾಗೂ ಡೆಂಟಲ್ ಕೌನ್ಸಿಲ್(ಡಿಸಿಐ)ಗೆ ಇಲ್ಲ ಎಂದು ಹೇಳಿತು. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ಟಿಎ) ಮೇ 2024ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿಬಂದಿತು; ಪರೀಕ್ಷೆಯಲ್ಲಿ ಶೇ.0.001ರಷ್ಟು ನಿರ್ಲಕ್ಷ್ಯ ಕೂಡ ಸಲ್ಲದು ಎಂದು ಕೇಂದ್ರ ಸರ್ಕಾರ ಮತ್ತು ಎನ್ಟಿಎಗೆ ಸುಪ್ರೀಂ ಕೋರ್ಟ್ ಎಚ್ಚರಿಸಿತು. ಬಳಿಕ ಸರ್ಕಾರ ಸಾರ್ವಜನಿಕ ಪರೀಕ್ಷೆಗಳು(ಅಕ್ರಮ ತಡೆ) ಕಾಯಿದೆ 2024 ಜಾರಿಗೊಳಿ ಸಿತು. ಕಾಯಿದೆಯ ಸೆಕ್ಷನ್ 3, ಪ್ರಶ್ನೆಪತ್ರಿಕೆ/ಉತ್ತರ ಕೀಗಳ ಅನಧಿಕೃತ ಸೋರಿಕೆಯನ್ನು ಅಕ್ರಮ ಎಂದು ಹೇಳುತ್ತದೆ. ಹೀಗಿದ್ದರೂ, 2026ರಲ್ಲಿ ಮತ್ತೆ ಪ್ರಶ್ನೆಪತ್ರಿಕೆ ಸೋರಿಕೆ ನಡೆದು, ಮರುಪರೀಕ್ಷೆ ನಡೆಸಬೇಕಾಯಿತು.
ಪ್ರಶ್ನೆಪತ್ರಿಕೆಯನ್ನು ರೂಪಿಸುವವರಲ್ಲಿ ಹೆಚ್ಚಿನವರು ಪುಣೆಯವರು ಆಗಿರುವುದೇಕೆ? ಇವರನ್ನು ಆಯ್ಕೆ ಮಾಡುವವರು ಯಾರು? ಯಾವ ನಿಯಮ/ಕಾಯಿದೆ/ಶಾಸನದ ಪ್ರಕಾರ ಇವರನ್ನು ಆಯ್ಕೆ ಮಾಡಲಾಗುತ್ತದೆ? ಅಕ್ರಮ ನಡೆದಲ್ಲಿ ಯಾವ ಕಾಯಿದೆಯನ್ವಯ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುತ್ತದೆ? ಪದೇಪದೇ ಪ್ರಶ್ನೆಪತ್ರಿಕೆ ಸೋರಿಕೆ ಆಗುತ್ತಿರುವುದು ಏಕೆ? ಈ ಹಿಂದಿನ ಪ್ರಕರಣಗಳಿಂದ ಕಲಿತ ಪಾಠಗಳೇನು? ಈ ಪ್ರಕರಣಗಳಲ್ಲಿ ಬಂಧಿತರಾದವರಿಗೆ ಏನು ಶಿಕ್ಷೆ ವಿಧಿಸಲಾಗಿದೆ? ಸೋರಿಕೆ ತಡೆಗೆ ತೆಗೆದುಕೊಂಡ ಕ್ರಮಗಳೇನು?-ಈ ಪ್ರಶ್ನೆಗಳಿಗೆ ಯಾರೂ ಉತ್ತರ ಕೊಡುತ್ತಿಲ್ಲ.
ನೀಟ್ ಗೋಜಲು: 1990ರಲ್ಲಿ ರಾಜ್ಯದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯನ್ನು ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರಂಭಿಸಿತು. ಉನ್ನಿಕೃಷ್ಣನ್ ವಿ/ಎಸ್ ಆಂಧ್ರಪ್ರದೇಶ ಸರ್ಕಾರ ಪ್ರಕರಣ(1993)ದಲ್ಲಿ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ನೀಡಿದ ʻಶಿಕ್ಷಣದ ಹಕ್ಕು ಜೀವಿಸುವ ಹಕ್ಕಿನಲ್ಲಿ (ಅನುಚ್ಛೇದ 21) ಅಂತರ್ಗತವಾಗಿರುವ ಮೂಲಭೂತ ಹಕ್ಕು. ಪ್ರತಿಯೊಂದು ಮಗುವಿಗೂ 14 ವರ್ಷ ವಯಸ್ಸಿನವರೆಗೆ ಉಚಿತ ಶಿಕ್ಷಣ ಪಡೆಯುವ ಹಕ್ಕಿದೆʼ ಎನ್ನುವ ತೀರ್ಪು ಕ್ಯಾಪಿಟೇಷನ್ ಶುಲ್ಕ ವ್ಯವಸ್ಥೆಗೆ ಇತಿಶ್ರೀ ಹಾಡಿತು. ಪೀಠದ ಭಾಗವಾಗಿದ್ದ ನ್ಯಾ.ಜೀವನ್ ರೆಡ್ಡಿ ಅವರು ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಚೌಕ ಟ್ಟೊಂದನ್ನು ಹಾಕಿಕೊಟ್ಟರು. ಹಲವು ರಾಜ್ಯಗಳು ಸಿಇಟಿ ವ್ಯವಸ್ಥೆಯನ್ನು ಅನುಸರಿಸಿದವು; ಇದನ್ನು ನೀಟ್ ಸ್ಥಳಾಂತರಿಸಿತು. ರಾಜ್ಯಗಳ ಗುಣಮಟ್ಟದ ಮತ್ತು ಪ್ರಮಾಣೀಕೃತ ವೈದ್ಯ ಶಿಕ್ಷಣ ಉಪಕ್ರಮಗಳನ್ನು ನೀಟ್, ನೆಲಸಮ ಮಾಡಿತು. ವೈದ್ಯ ಕಾಲೇಜುಗಳ ಪ್ರವೇಶಕ್ಕೆ ʻಒಂದು ದೇಶ, ಒಂದು ಪರೀಕ್ಷೆʼ ವ್ಯವಸ್ಥೆಯನ್ನು ನ್ಯಾಯಾಲಯ ಅನುಮೋದಿಸಿತು. ನೀಟ್ ಹಲವು ಸಂಕೀರ್ಣ ಸಮಸ್ಯೆಗಳನ್ನು ಸೃಷ್ಟಿಸಿದೆ; * ದೇಶದೆಲ್ಲೆಡೆ ಏಕ ರೂಪದ +2(ಪಿ ಯುಸಿ) ಪರೀಕ್ಷೆ ವ್ಯವಸ್ಥೆ ಇಲ್ಲ * ಕೋಚಿಂಗ್ ಕೇಂದ್ರಗಳು ನಾಯಿಕೊಡೆಗಳಂತೆ ತಲೆಯೆತ್ತಲು ಹಾಗೂ ಶಿಕ್ಷಣದ ವ್ಯಾಪಾರೀಕರಣಕ್ಕೆ ದಾರಿ ಮಾಡಿಕೊಟ್ಟಿದೆ * ನಗರ ಪ್ರದೇಶದ ಆರ್ಥಿಕ ವಾಗಿ ಪ್ರಬಲರಾಗಿರುವ ಹಾಗೂ ಮೇಲ್ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆಯುವ ಹಾಗೂ ಖಾಸಗಿ ಕಾಲೇಜುಗಳಲ್ಲಿ ನಿಯಮಿತ ಪಠ್ಯಕ್ರಮದೊಟ್ಟಿಗೆ ವಿಶೇಷ ತರಬೇತಿ ಪಡೆಯುವವರಿಗೆ ಲಾಭವಾಗುತ್ತಿದೆ. ಸರ್ಕಾರಿ ಹಾಗೂ ಗ್ರಾಮಾಂತರ ಪ್ರದೇಶದ ಕಾಲೇಜುಗಳ ಮಕ್ಕಳಿಗೆ ಈ ಪರೀಕ್ಷೆ ಮಾರಕ. ಸ್ಪರ್ಧೆಯಿಂದಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅವಕಾಶ ಕ್ಷೀಣಿಸಿದೆ. * ಪರೀಕ್ಷೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ನಡೆಯುವುದರಿಂದ, ಪ್ರಾದೇಶಿಕ ಭಾಷೆಯಲ್ಲಿ ಅಧ್ಯಯನ ಮಾಡುವವರಿಗೆ ಅಡೆತಡೆ ಎದುರಾಗುತ್ತದೆ * ಪರೀಕ್ಷೆಯಲ್ಲಿ ಅಕ್ರಮದಿಂದ ವೈದ್ಯಕೀಯ ಶಿಕ್ಷಣದ ಗುಣಮಟ್ಟ ಕುಸಿದಿದೆ ಮತ್ತು ವಿದೇಶಗಳಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ತೆರಳುವವರಿಗೆ ಸಮಸ್ಯೆಯಾಗಿದೆ. ನೀಟ್ ತೆಗೆದುಕೊಳ್ಳುವವರ ಸಂಖ್ಯೆ 2017ರಲ್ಲಿ 12 ಲಕ್ಷದಿಂದ 2026ರಲ್ಲಿ 24 ಲಕ್ಷಕ್ಕೆ ಹೆಚ್ಚಳಗೊಂಡಿದೆ. ರಾಜ್ಯಗಳ ವೈದ್ಯಕೀಯ ಕಾಲೇಜುಗಳ ಸೀಟುಗಳಿಗೆ ರಾಜ್ಯದಲ್ಲೇ ಪರೀಕ್ಷೆ ನಡೆಸಬೇಕು ಹಾಗೂ 12ನೇ ತರಗತಿ ಪರೀಕ್ಷೆ ಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಬೇಕು ಎಂಬ ಶಿಕ್ಷಣ ತಜ್ಞರ ಶಿಫಾರಸುಗಳು ಕೇಂದ್ರ ಸರ್ಕಾರದ ಕಿವಿಗೆ ಬಿದ್ದಿಲ್ಲ.
ಮೇ 13, 2026ರಂದು ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯಾಯಿತು. ಪರೀಕ್ಷೆಗೆ ಸಂಬಂಧಿಸಿದ ವಿಷಯಗಳನ್ನು ವಿತರಿಸಿದೆ ಮತ್ತು ಪರೀಕ್ಷೆಯಲ್ಲಿ ಅಕ್ರಮಕ್ಕೆ ನೆರವಾಗಿದೆ ಎಂದು ಸಂದೇಶವಾಹಕ ವೇದಿಕೆ ಟೆಲಿಗ್ರಾಂನ್ನು ಸರ್ಕಾರ ಜೂನ್ 22, 2026 ರವರೆಗೆ ಸೆಕ್ಷನ್ 69ಎ ಅಡಿ ನಿರ್ಬಂಧಿಸಿತು. ಐಟಿ ಕಾಯಿದೆ 2000ರ ಸೆಕ್ಷನ್ 2(1)(5) ʻಮಾಹಿತಿʼ ಯನ್ನು ದತ್ತಾಂಶ, ಸಂದೇಶ, ಪಠ್ಯ, ಚಿತ್ರ, ಶಬ್ದ, ಸಂಕೇತಗಳು, ಕಂಪ್ಯೂಟರ್ ಪ್ರೋಗ್ರಾಂ, ಸಾಫ್ಟ್ವೇರ್ ಮತ್ತು ದತ್ತಾಂಶಮೂಲ ಎಂದು ಪರಿಗಣಿಸುತ್ತದೆ. ಟೆಲಿಗ್ರಾಂನಂಥ ಆನ್ಲೈನ್ ವೇದಿಕೆಗಳು ಈ ಘಟಕಗಳ ʻಸಂಕಲನʼ ಅಥವಾ ʻಒಟ್ಟುಗೂಡಿಸುವಿಕೆʼ. ಟೆಲಿಗ್ರಾಂ ನಿಷೇಧವನ್ನು ದೆಹಲಿ ಹೈಕೋರ್ಟಿನಲ್ಲಿ ಪ್ರಶ್ನಿಸಿತು. ಸರ್ಕಾರ ಸೆಕ್ಷನ್ 69 ಎ ಅಡಿ ʻನಿರ್ದಿಷ್ಟ ಮಾಹಿತಿʼ ಯನ್ನು ಮಾತ್ರ ಬ್ಲಾಕ್ ಮಾಡಬಹುದು. ನಿಷೇಧ ತಾರತಮ್ಯದ ವರ್ತನೆ ಮತ್ತು ಐಟಿ ಕಾಯಿದೆಯ ಸೆಕ್ಷನ್ 14ರ ಉಲ್ಲಂಘನೆ; ವೇದಿಕೆ ಸರ್ಕಾರದ ಜೂನ್ 9ರ ಸೂಚನೆ ಯಂತೆ ನೀಟ್ಗೆ ಸಂಬಂಧಿಸಿದ 900ಕ್ಕೂ ಅಧಿಕ ಲಿಂಕ್ಗಳನ್ನು ತೆಗೆದುಹಾಕಿದೆ ಎಂದು ವಾದಿಸಿತು. ನ್ಯಾ. ತೇಜಸ್ ಕರಿಯಾ ಅವರ ರಜಾ ಕಾಲದ ಪೀಠ ಜೂನ್ 19, 2026ರ ತನ್ನ ಆದೇಶದಲ್ಲಿ ʻಸೆಕ್ಷನ್ 69ಎ ಅಡಿ ಬ್ಲಾಕ್ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ಈಗಾಗಲೇ ಇರುವ ಪೋಸ್ಟ್ಗಳನ್ನು ತಿದ್ದಲು ಜೂನ್ 30ರವರೆಗೆ ಅವಕಾಶ ಕೊಡಬಾರದುʼ ಎಂದು ಹೇಳಿತು. ಟೆಲಿಗ್ರಾಂನ ವಾದವು ಡಿಜಿಟಲ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ, ಅನುರಾಧಾ ಬಾಸಿನ್ ವಿ/ಎಸ್ ಭಾರತ ಸರ್ಕಾರ 2020 ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಅನುಗುಣವಾಗಿದೆ; ಮೂಲಭೂತ ಹಕ್ಕುಗಳ ಮೇಲಿನ ನಿರ್ಬಂಧವು ಪ್ರಮಾಣಬದ್ಧವಾಗಿರಬೇಕು ಮತ್ತು ಕನಿಷ್ಠ ನಿರ್ಬಂಧ ಕ್ರಮವನ್ನು ಆಯ್ಕೆ ಮಾಡಿಕೊಳ್ಳಬೇಕು. ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 144 ರ ಅಡಿಯಲ್ಲಿನ ನಿರ್ಬಂಧಗಳನ್ನು ಕಾನೂನುಬದ್ಧ ಭಿನ್ನಭಿಪ್ರಾಯವನ್ನು ಹತ್ತಿಕ್ಕಲು ಬಳಸಬಾರದು ಎಂದು ಸುಪ್ರೀಂ ಹೇಳಿತ್ತು.
ಸಾಮಾಜಿಕ ವೇದಿಕೆಗಳಿಗೆ ನಿರ್ಬಂಧ: ದೇಶದಲ್ಲಿ ಟೆಲಿಗ್ರಾಂನ 15 ಕೋಟಿ ಗ್ರಾಹಕರಿದ್ದಾರೆ. ಡಿಜಿಟಲ್ ವೇದಿಕೆಗಳು ಸಂವಹನ, ಕಲಿಕೆ, ಸಂಘಟನೆ ಮತ್ತು ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳಲು ನೆರವಾಗುತ್ತವೆ. ಇವನ್ನು ನಿಯಂತ್ರಿಸುವ ಸರ್ಕಾರದ ಅಧಿಕಾರಕ್ಕೆ ಇರುವ ಸಂವಿಧಾನಾತ್ಮಕ ಮಿತಿಗಳೇನು? ಟೆಲಿಗ್ರಾಂನ್ನು ಬ್ಲಾಕ್ ಮಾಡಲು ಬಳಸಿದ ದಾರಿ ಸಂವಿಧಾನಬದ್ಧವಾಗಿದೆಯೇ? ಸರ್ಕಾರದ ಕ್ರಮ ಸಮರ್ಪಕವೇ ಎನ್ನುವುದರ ಜೊತೆಗೆ ಅದನ್ನು ಹೇಗೆ ಸಾಧಿಸಲಾಯಿತು ಎನ್ನುವುದೂ ಮುಖ್ಯವಾಗಲಿದೆ. ಸಾರ್ವಜನಿಕರ ಹಿತರಕ್ಷಣೆಗೆ ಇರುವ ಸರ್ಕಾರವೊಂದು ಅತಿರೇಕದ, ಸಪ್ರಮಾಣವಲ್ಲದ ಹಾಗೂ ಕಾನೂನುಬದ್ಧವಲ್ಲದ ಕ್ರಮ ತೆಗೆದುಕೊಂಡರೆ, ಅದು ಸಂವಿಧಾನ ವನ್ನು ಉಲ್ಲಂಘಿಸಿದಂತೆ ಆಗಲಿದೆ.
ಸೆಕ್ಷನ್ 69ಎ ಅಡಿ ದೇಶದ ಸಾರ್ವಭೌಮತ್ವ, ಸುಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಮಾಹಿತಿಯನ್ನು ಬ್ಲಾಕ್ ಮಾಡಬಹುದು. ಇದರನ್ವಯ ನಿರ್ದಿಷ್ಟ ಜಾಲತಾಣಗಳು, ಯುಆರ್ಎಲ್ಗಳು(ಯೂನಿಫಾ ರ್ಮ್ ರಿಸೋರ್ಸ್ ಲೊಕೇಟರ್), ಪುಟಗಳು ಹಾಗೂ ವಿಷಯಗಳನ್ನು ಬ್ಲಾಕ್ ಮಾಡಲಾಗುತ್ತಿತ್ತು; ಆದರೆ, ಈಗ ವೇದಿಕೆಯೊಂದನ್ನು ಬ್ಲಾಕ್ ಮಾಡಲಾಗಿದೆ. ಇದು ಡಿಜಿಟಲ್ ನಿಯಂತ್ರಣದ ವಿರೂಪ. ಇದರಿಂದ ತಪ್ಪು ಮಾಡದ ಗ್ರಾಹಕರು ತೊಂದರೆಗೀಡಾಗುತ್ತಾರೆ. ಅಂತರ್ಜಾಲ ಸ್ಥಗಿತಗೊಳಿಸುವಲ್ಲಿ ದೇಶ ಮುಂಚೂಣಿಯಲ್ಲಿದೆ ಎನ್ನುವುದನ್ನು ಪರಿಗಣಿಸಿದರೆ, ಈ ಬ್ಲಾಕ್ ಪ್ರವೃತ್ತಿ ಕಾಲಕ್ರಮೇಣ ಬೇರೆ ವೇದಿಕೆಗಳಿಗೂ ಮುಂದುವರಿಯಬಹು ದು. ಪ್ರಶ್ನೆಪತ್ರಿಕೆ ಸೋರಿಕೆ ಆಡಳಿತಾತ್ಮಕ ವೈಫಲ್ಯ, ಅದಕ್ಷತೆ ಮತ್ತು ನಿರ್ಲಕ್ಷ್ಯದ ಫಲ. ಆ ವೈಫಲ್ಯದ ಹೊಣೆಯನ್ನು ಸಂಬಂಧಿಸಿದ ಸಚಿವ ಹೊರಬೇಕಿತ್ತು. ಬದಲಿಗೆ, ಸಾಮಾಜಿಕ ವೇದಿಕೆಯೊಂದಕ್ಕೆ ನಿಷೇಧ ಹೇರಲಾಯಿತು.
ಡಿಜಿಟಲ್ ವೇದಿಕೆಗಳ ಮೂಲಕ ಪ್ರತಿನಿತ್ಯ ಕೋಟ್ಯಂತರ ಸಂದೇಶಗಳು ರವಾನೆಯಾಗುತ್ತವೆ. ಇವು ಬಳಕೆದಾರರು ಸೃಷ್ಟಿಸಿದ ವಿಷಯದ ವಿನಿಮಯ ಹಾಗೂ ಪ್ರಸಾರಕ್ಕೆ ಅವಕಾಶ ನೀಡುವ ವ್ಯಾಪಾರ ಮಾದರಿಯನ್ನು ಆಧ ರಿಸಿವೆ. ಈ ವೇದಿಕೆಗಳ ಮುಕ್ತತೆಯೇ ಅವುಗಳ ದುರ್ಬಳಕೆಗೆ ಕಾರಣವಾಗಿದೆ. ಕಾನೂನಿನ ಪ್ರಕಾರ, ಮಧ್ಯಸ್ಥಿಕೆ ವೇದಿಕೆಗಳು ಪ್ರಕಾಶಕರಿಗಿಂತ ಭಿನ್ನ; ಅವು ವೃತ್ತಪತ್ರಿಕೆಗಳಳತೆ ಸುದ್ದಿಯನ್ನು ಸೃಷ್ಟಿಸುವುದಿಲ್ಲ. ಈ ವಿಭಿನ್ನತೆ ಅವು ಗಳಿಗೆ ಕಾನೂನಿನ ರಕ್ಷಣೆ ನೀಡುತ್ತದೆ. ಪ್ರಸಾರವಾಗುವ ಮೊದಲೇ ಹಾನಿಕರ ವಿಷಯಗಳನ್ನು ತಡೆಯಬೇಕು ಎಂದು ಸರ್ಕಾರ ಹೇಳುತ್ತದೆ. ಆದರೆ, ದುರ್ಬಳಕೆ ತಡೆಯುವ ಪ್ರಯತ್ನಗಳು ಅಥವಾ ಹಾನಿಕರ ವಿಷಯವನ್ನು ತಕ್ಷಣ ತೆಗೆದುಹಾಕುವಿಕೆ ಮೂಲಕ ವೇದಿಕೆಗಳನ್ನು ಅಳೆಯಬಾರದೇಕೆ?
ದೆಹಲಿ ಹೈಕೋರ್ಟ್ ಆದೇಶ ಎತ್ತಿರುವ ಸಂವಿಧಾನಾತ್ಮಕ ಪ್ರಶ್ನೆ-ಪ್ರಮಾಣಬದ್ಧತೆಯದು. ಸಾರ್ವಜನಿಕ ಪರೀಕ್ಷೆಗಳ ಋಜುತ್ವವನ್ನು ಕಾಪಾಡಿಕೊಳ್ಳುವುದು ಸರ್ಕಾರದ ಕರ್ತವ್ಯ. ವೇದಿಕೆಯನ್ನು ಬ್ಲಾಕ್ ಮಾಡುವ ಬದಲು ವಿಷಯ ಬ್ಲಾಕ್ ಮಾಡುವುದು, ಖಾತೆ ಅಮಾನತು ಮತ್ತಿತರ ಮಾರ್ಗಗಳ ಮೂಲಕ ಈ ಉದ್ದೇಶ ಸಾಧಿಸಲು ಸಾಧ್ಯವಿರಲಿಲ್ಲವೇ? ಮಧ್ಯಸ್ಥಿಕೆ ವೇದಿಕೆಗಳ ಹೊಣೆಗಾರಿಕೆ ಪ್ರಶ್ನೆ ಜಗತ್ತಿನೆಲ್ಲೆಡೆ ಇರುವ ಸಮಸ್ಯೆ; ಪ್ರಜಾಪ್ರಭುತ್ವ ಗಳು ಡಿಜಿಟಲ್ ಅವಕಾಶದಲ್ಲಿ ಸುರಕ್ಷತೆ, ಉತ್ತರದಾಯಿತ್ವ, ಅನ್ವೇಷಣೆ ಪ್ರವೃತ್ತಿ ಮತ್ತು ಸ್ವಾತಂತ್ರ್ಯ ವನ್ನು ಕಾಯ್ದುಕೊಳ್ಳಲು ಒದ್ದಾಡುತ್ತಿವೆ. ಟೆಲಿಗ್ರಾಂ ವಿವಾದವನ್ನು ಜನ ಕೆಲವೇ ದಿನಗಳಲ್ಲಿ ಮರೆತುಬಿಡುತ್ತಾರೆ. ಆದರೆ, ಅದು ಎತ್ತಿದ ಪ್ರಶ್ನೆಗಳು ಮಾಸುವುದಿಲ್ಲ. ಸಂವಿಧಾನಾತ್ಮಕ ಸ್ವಾತಂತ್ರ್ಯವನ್ನು ರಕ್ಷಿಸಬೇಕಿರುವ ಸರ್ಕಾರಗಳೇ ಅದನ್ನು ಹತ್ತಿಕ್ಕುವುದನ್ನು ತಡೆಯುವುದು ಹೇಗೆ? ತಂತ್ರಜ್ಞಾನವನ್ನು ಒಳಿತು ಇಲ್ಲವೇ ಕೆಡುಕು ಎರಡಕ್ಕೂ ಬಳಸಬಹುದು. ಕೆಡುಕನ್ನೇ ಎತ್ತಿ ಆಡಿದರೆ, ಅನ್ವೇಷಣೆ ಪ್ರವೃತ್ತಿ ಕುಂಠಿತವಾಗುತ್ತದೆ.
ಟೆಲಿಗ್ರಾಂ ವೈಶಿಷ್ಟ್ಯ: ದುಬೈಯಲ್ಲಿ ಕೇಂದ್ರ ಕಚೇರಿಯಿರುವ ಟೆಲಿಗ್ರಾಂ, ಕ್ಲೌಡ್ ಆಧರಿತ ಸಂಗ್ರಹ, ಅಧಿಕ ಚಾನೆಲ್ಗಳು, ಬಳಕೆ ಹೆಸರುಗಳು, ಚಾಟ್ಗಳು ಮತ್ತು ಸಂದೇಶದ ಸಂಪಾದನೆಯಂಥ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ದುಬಾರಿ ಹಾಗೂ ಸ್ಪರ್ಧಾತ್ಮಕವಾಗಿರುವ ಸಂದೇಶವಾಹಕ ಆಪ್ಗಳ ಮಾರುಕಟ್ಟೆ(ವಾಟ್ಸ್ಆಪ್, ಸಿಗ್ನಲ್ ಇತ್ಯಾದಿ)ಯಲ್ಲಿ ಟೆಲಿಗ್ರಾಂ ಯಶಸ್ಸು, ಅದರ ವಿಭಿನ್ನತೆಯಲ್ಲಿ ಇದೆ. ಟೆಲಿಗ್ರಾಂ ಸಂಸ್ಥಾಪಕ ಪಾವೆಲ್ ದುರೋವ್ ಅವರ ಹಿಂದಿನ ಕಂಪನಿ ವಿ ಕೊಂಟ್ಯಾಕ್ಟ್. ಕಡತದ ಗಾತ್ರಕ್ಕೆ ಮಿತಿ ವಿಧಿಸದೆ ಇರುವುದು, ಶುಲ್ಕರಹಿತ ಸೇವೆ, ಬಳಕೆದಾರರ ಗೋಪ್ಯತೆ ರಕ್ಷಣೆ ಹಾಗೂ ಅಭಿವ್ಯಕ್ತಿ/ಸಂಘಟನೆ ಸ್ವಾತಂತ್ರ್ಯ ಸೇರಿದಂತೆ ಮಾನವ ಹಕ್ಕು ಗಳಿಗೆ ಬದ್ಧತೆಯಿಂದ ಟೆಲಿಗ್ರಾಂ ಸಾಮಾಜಿಕ ಕಾರ್ಯಕರ್ತರು ಹಾಗೂ ಭಿನ್ನಮತೀಯರಿಗೆ ಇಷ್ಟವಾಗಿದೆ. ಸರ್ಕಾರಗಳ ಕೆಂಗಣ್ಣಿಗೆ ಇದೊಂದು ಕಾರಣ. ʻಟೆಲಿಗ್ರಾಂ ಪ್ರತಿನಿತ್ಯ ಭಾರತದಲ್ಲಿ ಹತ್ತಾರು ದಶಲಕ್ಷ ಡಾಲರ್ ನಷ್ಟ ಮಾಡಿಕೊಳ್ಳುತ್ತಿದೆʼ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ದೇಶದಲ್ಲಿ 15 ಕೋಟಿ ಟೆಲಿಗ್ರಾಂ ಬಳಕೆದಾರರಿದ್ದಾರೆ. ವೈವಿಧ್ಯೀಕರಣದಿಂದ ಹಣ ಗಳಿಸುವ ಮೆಟಾ/ಎಕ್ಸ್, ಸರ್ಕಾರದ ಜೊತೆಗೆ ಹೊಂದಾಣಿಕೆ ಮಾಡಿ ಕೊಂಡಿವೆ; ಆದಾಯ ಕೈ ತಪ್ಪುವ ಆತಂಕದಿಂದ ಹಟಮಾರಿತನ ತೋರಿಸುವುದಿಲ್ಲ. ರಾಜ್ಯದೊಟ್ಟಿಗೆ ಕೊಡುಕೊಳು ಸಂಬಂಧ ಉಳಿಸಿಕೊಳ್ಳುವುದು ಬಿಗ್ಟೆಕ್ ಕಂಪನಿಗಳ ಸಾಮಾನ್ಯ ಲಕ್ಷಣ. ಆದರೆ, ದುರೋವ್ ಇದರ ಅಗತ್ಯವಿಲ್ಲ. ಹೀಗಾಗಿಯೇ ಟೆಲಿಗ್ರಾಂ ವಕೀಲರಾದ ಖೇತಾನ್ ಆಂಡ್ ಕಂಪನಿ ದೆಹಲಿ ನ್ಯಾಯಾಲಯದಲ್ಲಿ ನಿಷೇಧವನ್ನು ಪ್ರಶ್ನಿಸುತ್ತಿರುವ ಹೊತ್ತಲ್ಲೇ, ಕಂಪನಿ ಎಕ್ಸ್ನಲ್ಲಿ ʻಪ್ರತಿವರ್ಷ ನೀರಿನಲ್ಲಿ ಮುಳುಗಿ 3 ಲಕ್ಷ ಜನ ಸಾಯುತ್ತಾರೆ. ಆದ್ದರಿಂದ, ಸಮಾಜದ ರಕ್ಷಣೆಗೆ ನೀರಿನ ಸೇವನೆ ಇಲ್ಲವೇ ಸಂಗ್ರಹ ಅಕ್ರಮ ಆಗುತ್ತದೆ. ಘನ ಆಹಾರ ಸೇವನೆಯಿಂದ ಉಸಿರು ಕಟ್ಟುವ ಸಾಧ್ಯತೆ ಇರುವುದರಿಂದ, ಸರ್ಕಾರ ಅದರ ನಿಷೇಧವನ್ನು ಕೂಡ ಪರಿ ಗಣಿಸಬೇಕು. ನೀವು ಪ್ರಬುದ್ಧರಲ್ಲ; ಮಗು. ಮಕ್ಕಳ ಆಹಾರ ಸೇವಿಸಿʼ ಎಂದು ಪೋಸ್ಟ್ ಹಾಕಿತ್ತು.
ಕೃತಿಚೌರ್ಯಗೊಂಡ ಪುಸ್ತಕ, ವೃತ್ತಪತ್ರಿಕೆ, ಟಿವಿ ಧಾರಾವಾಹಿಗಳು ಹಾಗೂ ಚಲನಚಿತ್ರಗಳು ವೇದಿಕೆಯಲ್ಲಿದೆ. ಕೃತಿಚೌರ್ಯ ದೂರುಗಳಿಗೆ ಸಂಬಂಧಿಸಿದಂತೆ ತಡವಾಗಿ ಕ್ರಮ ತೆಗೆದುಕೊಳ್ಳುತ್ತದೆ ಇಲ್ಲವೇ ಕ್ರಮವನ್ನೇ ತೆಗೆದು ಕೊಳ್ಳುವುದಿಲ್ಲ ಎಂದು ಮನರಂಜನೆ ಉದ್ಯಮ ಹಲವು ದೂರು ದಾಖಲಿಸಿದೆ. ಕೆಲವು ಹಿಂದಿ ವೃತ್ತಪತ್ರಿಕೆಗಳ ಪ್ರಕಾಶಕರೊಂದಿಗೆ ಕಾಪಿರೈಟ್ ಉಲ್ಲಂಘನೆ ವಿವಾದದಲ್ಲಿಯೂ ಸಿಲುಕಿಕೊಂಡಿದೆ. ಸರ್ಕಾರ ಈ ಹಿನ್ನೆಲೆಯಲ್ಲಿ ಜುಲೈ 4, 2026ರಂದು ʻಪೈರಸಿ ವಿರೋಧಿʼ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದೆ. ಕೃತಿಚೌರ್ಯ ಪತ್ತೆಗೆ ಕ್ರಮ ತೆಗೆದುಕೊಳ್ಳಬೇಕು ಹಾಗೂ ಅಂಥ ವಿಷಯಗಳನ್ನು ತೆಗೆದುಹಾಕಬೇಕು; 15 ದಿನಗಳೊಳಗೆ ನೋಟಿಸ್ಗೆ ಉತ್ತರ ನೀಡಬೇಕು ಎಂದು ಹೇಳಿದೆ. ಐಟಿ ಕಾಯಿದೆ 2021ರ ಸೆಕ್ಷನ್ 3(1)(ಬಿ) ಪ್ರಕಾರ, ಟೆಲಿಗ್ರಾಂ ಮತ್ತಿತರ ಮಧ್ಯಸ್ತಿಕೆದಾರರು ಗ್ರಾಹಕರು ಪೇಟೆಂಟ್, ಕಾಪಿರೈಟ್/ಟ್ರೇಡ್ಮಾರ್ಕ್ ಇಲ್ಲವೇ ಇತರ ಯಜಮಾನಿಕೆ ಹಕ್ಕು ಗಳನ್ನು ಉಲ್ಲಂಘಿಸದಂತೆ ನೋಡಿಕೊಳ್ಳಬೇಕು. ಈ ಲೋಪವನ್ನು ಟೆಲಿಗ್ರಾಂ ನಿರ್ಲಕ್ಷಿಸಿದೆ.
ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆ ಹಂಚಿಕೊಳ್ಳದೆ ಮಾತನ್ನಾಡಬಹುದಾದ ʻಯೂಸರ್ ನೇಮ್ʼ ಸೌಲಭ್ಯ ಕಲ್ಪಿಸುವುದಾಗಿ ಹೇಳಿದ್ದ ವಾಟ್ಸ್ಆಪ್ಗೆ ಸರ್ಕಾರ ಜುಲೈ 1,2026ರಂದು ನೋಟಿಸ್ ನೀಡಿತು. ಈ ಸೌಲಭ್ಯ ಈಗಾಗಲೇ ಸಿಗ್ನಲ್ ಹಾಗೂ ಟೆಲಿಗ್ರಾಂನಲ್ಲಿ ಲಭ್ಯವಿದೆ. ʻಯೂಸರ್ನೇಮ್ʼ ಸೌಲಭ್ಯದಿಂದ ಆನ್ಲೈನ್ ವಂಚನೆ, ಡಿಜಿಟಲ್ ಬಂಧನ ಇತ್ಯಾದಿ ಹೆಚ್ಚಲಿದೆ ಎನ್ನುವುದು ಸರ್ಕಾರದ ಅಭಿಪ್ರಾಯ. ʻಮೊಬೈಲ್ ಸಂಖ್ಯೆ ಬಹಿರಂಗ ಗೊಳಿಸಲು ಇಷ್ಟವಿಲ್ಲದವರಿಂದ ಸಂದೇಶ ಬಂದರೆ, ಕಳಿಸಿದವರ ದೇಶ ಹಾಗೂ ಅವರು ಈಗಾಗಲೇ ನಿಮ್ಮ ಫೋನ್ಬುಕ್ನಲ್ಲಿ ಇದ್ದಾರೆಯೇ ಎಂದು ತೋರಿಸುತ್ತದೆ. ಸೌಲಭ್ಯದ ದುರ್ಬಳಕೆ ತಡೆಯಲು ಹಲವು ಹಂತಗಳ ವ್ಯವಸ್ಥೆ ಇದೆʼ ಎಂದು ಪ್ರತಿಕ್ರಿಯಿಸಿದ್ದ ವಾಟ್ಸ್ಆಪ್, ಆನಂತರ ಸದ್ಯಕ್ಕೆ ಜಾರಿ ಇಲ್ಲ ಎಂದು ನುಣುಚಿಕೊಂಡಿತು. 2025ರಲ್ಲಿ ನೋಂದಾಯಿತ ಸಿಮ್ ಇಲ್ಲದೆ ಆಪ್ ಬಳಕೆಗೆ ಅವಕಾಶ ನೀಡಬಾರದು ಎಂದು ಸರ್ಕಾರ ತಾಕೀ ತು ಮಾಡಿತ್ತು; ವಾಟ್ಸ್ಆಪ್ ಆ ನಿರ್ದೇಶನವನ್ನು ಪಾಲಿಸಿತು. ಐಟಿ ಕಾಯಿದೆ 2000ರ ಸೆಕ್ಷನ್ 2(1)(ಡಬ್ಲ್ಯು) ಮತ್ತು 2(1)(ವಿ) ಪ್ರಕಾರ, ವಾಟ್ಸ್ಆಪ್ ಒಬ್ಬ ʻಮಧ್ಯಸ್ಥಗಾರʼ ಮತ್ತು ʻಗಮನಾರ್ಹ ಸಾಮಾಜಿಕ ಮಾಧ್ಯಮ ಮಧ್ಯಸ್ಥಗಾರʼ. ಗಮನಾರ್ಹ ಮಧ್ಯಸ್ಥಗಾರ ಎಂದರೆ, 50 ಲಕ್ಷಕ್ಕೂ ಅಧಿಕ ಗ್ರಾಹಕರಿರುವ ವೇದಿಕೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟಿಸಿದ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ)ಯ ಅಧಿಕೃತ ಜಾಲತಾಣ ಹಾಗೂ ಎಕ್ಸ್ ಖಾತೆಗೂ ಬ್ಲಾಕ್ ಭಾಗ್ಯ ಲಭಿಸಿತು. ಪ್ರತಿರೋಧದ ನೆಲೆಗಳನ್ನು ಛಿದ್ರಗೊಳಿಸುವಿಕೆ ಮತ್ತು ಸಾರ್ವಜನಿಕರಿಗೆ ಅಭಿಪ್ರಾಯ ವ್ಯಕ್ತಪಡಿಸಲು ಇರುವ ವೇದಿಕೆಗಳನ್ನು ಹಣಿಯಲಾಗುತ್ತಿದೆ. ಸಾಮಾಜಿಕ ವೇದಿಕೆಗಳು ಕಾಲಕ್ರಮೇಣ ಸರ್ಕಾರದ ವಶವರ್ತಿ ಆಗಬಹುದು. ನಿರ್ಲಕ್ಷ್ಯದ, ಉತ್ತರದಾಯಿತ್ವ ಇಲ್ಲದ ಆಡಳಿತದಿಂದ ಭಿನ್ನ ಧ್ವನಿಗಳಿಗೆ ವೇದಿಕೆಗಳೇ ಇಲ್ಲದಂತೆ ಆಗಲಿದೆ. ಇದು ಕಠಿಣ ಕಾಲ.

